ಮೈಸೂರಿನಲ್ಲಿ ಟಿವಿಎಸ್ ಕಂಪನಿಯ ತ್ರಿಚಕ್ರಯೋಜನೆ
ಚೆನ್ನೈ : ಭಾರತೀಯ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿರುವ ಟಿವಿಎಸ್ ಮೋಟಾರ್ ಕಂಪನಿ- ಉದ್ದೇಶಿತ ತ್ರಿಚಕ್ರ ವಾಹನಗಳ ಯೋಜನೆಯನ್ನು ಮೈಸೂರಿನಲ್ಲಿ ಅನುಷ್ಠಾನಕ್ಕೆ ತರುವ ಕುರಿತು ಸೆಪ್ಟಂಬರ್ ವೇಳೆಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ.
ಯೋಜನೆಯ ರೂಪುರೇಷೆಗಳು ಇನ್ನೂ ಪೂರ್ಣಗೊಂಡಿಲ್ಲ . ಸೆಪ್ಟಂಬರ್ ವೇಳೆಗೆ ಯೋಜನೆಯ ಕುರಿತು ಟಿವಿಎಸ್ ಕಂಪನಿ ಸ್ಪಷ್ಟ ನಿಲುವು ತಾಳಲು ಸಾಧ್ಯವಾಗಬಹುದು ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ವೇಣು ಶ್ರೀನಿವಾಸನ್ ಏಪ್ರಿಲ್ 28ರ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕ ಸರ್ಕಾರದಿಂದ ದೊರಕಬಹುದಾದ ಸವಲತ್ತುಗಳೊಂದಿಗೆ ಯೋಜನೆ ಥಳಕು ಹಾಕಿಕೊಂಡಿಲ್ಲ . ಕಾರು ಅಥವಾ ಟ್ರಕ್ ತಯಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಯಾವುದೇ ಉದ್ದೇಶ ಟಿವಿಎಸ್ ಕಂಪನಿಗೆ ಸದ್ಯಕ್ಕಿಲ್ಲ ಎಂದು ಶ್ರೀನಿವಾಸನ್ ಸ್ಪಷ್ಟಪಡಿಸಿದರು.
ಭಾರತೀಯ ದ್ವಿಚಕ್ರ ವಾಹನಗಳ ಮಾರುಕಟ್ಟೆ 2010 ರ ವೇಳೆಗೆ ಭಾರೀ ಬೆಳವಣಿಗೆ ಹೊಂದಲಿದ್ದು , ಮಾರುಕಟ್ಟೆಯಲ್ಲಿ ಪ್ರತಿಶತ 25ರಷ್ಟಾದರೂ ಏಕಸ್ವಾಮ್ಯ ಹೊಂದುವ ಬಯಕೆಯನ್ನು ಕಂಪನಿ ಹೊಂದಿದೆ. ಪ್ರಸ್ತುತ ವಾರ್ಷಿಕ 1.8 ಮಿಲಿಯನ್ ವಾಹನಗಳ ಉತ್ಪಾದನಾ ಸಾಮರ್ಥ್ಯವನ್ನು ಟಿವಿಎಸ್ ಕಂಪನಿ ಹೊಂದಿದೆ ಎಂದು ಶ್ರೀನಿವಾಸನ್ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...