ಸಾಲಿಗ್ರಾಮದಲ್ಲಿ 12 ದಿನಗಳ ಕಲಶೋತ್ಸವ ಸಂಭ್ರಮ
ಸಾಲಿಗ್ರಾಮ : ಕರಾವಳಿ ಕರ್ನಾಟಕದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾದ ಸಾಲಿಗ್ರಾಮ ಗುರು ನರಸಿಂಹ ದೇವಳದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳು ಏಪ್ರಿಲ್ 30ರಿಂದ ಆರಂಭವಾಗಲಿವೆ.
12 ದಿನಗಳ ಕಾಲ ಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಇದೇ ಅವಧಿಯಲ್ಲಿ ಬ್ರಹ್ಮರಥೋತ್ಸವವೂ ನೆರವೇರಲಿದೆ. ಕರಾವಳಿ ಕರ್ನಾಟಕದಲ್ಲಿ ಕೂಟ ಅಥವಾ ಕೋಟ ಬ್ರಾಹ್ಮಣರೆಂದೇ ಗುರುತಿಸಿಕೊಂಡ ಸಮುದಾಯದ ಮೂಲನೆಲೆಯಾದ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಕಲಶೋತ್ಸವಕ್ಕೆ ಕರಾವಳಿ ಹಾಗೂ ರಾಜ್ಯದ ಇತರೆಡೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಮಠಗಳನ್ನು ಕಟ್ಟಿಕೊಳ್ಳದೆ, ವಿಷ್ಣು ಹಾಗೂ ಈಶ್ವರ ಇಬ್ಬರನ್ನೂ ಪೂಜಿಸುವ ಕೂಟ ಬ್ರಾಹ್ಮಣರು ಈ ದೇವಸ್ಥಾನವನ್ನು ದಶಕಗಳಿಂದ ನಿರ್ವಹಿಸಿಕೊಂಡು ಬರುತ್ತಿದ್ದಾರೆ. 12 ದಿನಗಳ ಬ್ರಹ್ಮ ಕಲಶೋತ್ಸವ ನೇತೃತ್ವವನ್ನು ನಿರ್ವಹಣಾ ಟ್ರಸ್ಟೀ ಕೆ. ವಿ. ಕೇಶವ ಕಾರಂತ್ ವಹಿಸುವರು.
ಏಪ್ರಿಲ್ 26 ಮತ್ತು 27ರಂದು ದೇವಸ್ಥಾನದಲ್ಲಿ ಕೂಟ ಬ್ರಾಹ್ಮಣರ ಸಮಾವೇಶ ನಡೆಯಲಿದೆ ಎಂದು ಕೂಟ ಮಹಾ ಜಗತ್ತಿನ ಪ್ರಕಟಣೆ ತಿಳಿಸಿದೆ. ಪ್ರಸಿದ್ಧ ಶಿಕ್ಷಣ ತಜ್ಞ ಪ್ರೊ. ಕೆ. ಆರ್. ಹಂದೆ ಸಮಾವೇಶದ ಅಧ್ಯಕ್ಷತೆ ವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...