ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು
ಬೆಂಗಳೂರು: ಮೇ ತಿಂಗಳ ಎರಡನೇ ವಾರದಲ್ಲಿ ರಾಜ್ಯದಲ್ಲಿ - ವಿಶೇಷವಾಗಿ ಬೆಂಗಳೂರಿನಲ್ಲಿ ಬಿಸಿಲ ತಾಪ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಎ. ಎಲ್. ಕೊಪ್ಪರ್ ಭವಿಷ್ಯ ನುಡಿದಿದ್ದಾರೆ.
ಸಂಪ್ರದಾಯದಂತೆ ಜೂನ್ ಮೂರರಿಂದ ಆರನೇ ತಾರೀಖಿನ ಒಳಗೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸುತ್ತದೆ. ನೈರುತ್ಯ ಮಾರುತ ತರುವ ಮುಂಗಾರಿನಿಂದ ರಾಜ್ಯದಲ್ಲಿ ಶೇ.70 ರಷ್ಟು ಮಳೆಯಾಗುತ್ತದೆ. ಕೇರಳದ ಮೂಲಕ ಮುಂಗಾರು ರಾಜ್ಯವನ್ನು ಪ್ರವೇಶಿಸುತ್ತದೆ. ಕರಾವಳಿಯಿಂದ ಆರಂಭವಾಗುವ ಮಳೆ ಜೂನ್ ತಿಂಗಳ ಮಧ್ಯಂತರದಲ್ಲಿ ಉತ್ತರ ಕರ್ನಾಟಕ ಪ್ರವೇಶಿಸುತ್ತದೆ.
ಈ ನಡುವೆ ಮೇ ತಿಂಗಳಿನಲ್ಲಿ ಆಗಾಗ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಕರಾವಳಿ ಹಾಗೂ ಬಯಲು ಸೀಮೆಯಲ್ಲಿ ಬಿಸಿಲ ಧಗೆ ಕಡಿಮೆಯಾಗಲಿದೆ. ಆದರೆ ಉತ್ತರ ಕರ್ನಾಟಕದವರು ಜೂನ್ ಮಧ್ಯಭಾಗದವರೆಗೆ ಬಿಸಿಲ ತಾಪ ಸಹಿಸಿಕೊಳ್ಳಬೇಕಾಗುತ್ತದೆ.
ಹುಬ್ಬಳ್ಳಿಯಲ್ಲಿ ಮಳೆ :
ಹುಬ್ಬಳ್ಳಿಯಲ್ಲಿ ಗುರುವಾರ ರಾತ್ರಿ ಭಾರೀ ಮಳೆ ಸುರಿಯಿತು. ರಾತ್ರಿ 9 ಗಂಟೆಗೆ ಆರಂಭವಾದ ಮಳೆ ಮಧ್ಯರಾತ್ರಿ 2.30ರವರೆಗೆ ಎಡೆ ಬಿಡದೆ ಸುರಿಯಿತು.
ಧಾರಾಕಾರವಾಗಿ ಸುರಿದ ಮಳೆಗೆ ನಗರದ ಎಸ್ಸೆಂ ಕೃಷ್ಣ ಬಡಾವಣೆಯಲ್ಲಿ ಇತ್ತೀಚೆಗೆ ಕಟ್ಟಿದ್ದ ಎಲ್ಲಾ ಆಶ್ರಯ ಮನೆಗಳ ಛಾವಣಿಗಳು ಕಿತ್ತು ಹೋಗಿವೆ. ಸುಮಾರು 48 ಬಡ ಕುಟುಂಬಗಳು ಸೂರು ಕಳಕೊಂಡಿವೆ. ಇಡೀ ರಾತ್ರಿ ಮಕ್ಕಳು ಮಹಿಳೆಯರು ಮಳೆಯಲ್ಲಿ ನೆಂದರೆ, ದವಸ ಧಾನ್ಯಗಳು ನೀರು ಪಾಲಾಗಿವೆ.
ಬಡಾವಣೆಯಲ್ಲಿನ ಏಕೈಕ ವಿದ್ಯುತ್ ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದೆ. ಬಡಾವಣೆಯಲ್ಲಿದ್ದ ಏಳೆಂಟು ವಿದ್ಯುತ್ ಕಂಬಗಳು ಬುಡ ಮೇಲಾಗಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...