ಕೃಷ್ಣ ರಾಜ್ಯದಲ್ಲಿ ಪ್ಲೇವಿನ್ ಜೊತೆಗೆ ಒಂದಂಕಿ ಲಾಟರಿ
ಬೆಂಗಳೂರು : ಪ್ಲೇವಿನ್, ಸ್ಮಾರ್ಟ್ವಿನ್ ಮುಂತಾದ ಆನ್ಲೈನ್ ಲಾಟರಿಗಳ ಪ್ರಯೋಗಶಾಲೆಯಾಗಿರುವ ಕರ್ನಾಟಕದಲ್ಲಿ ಸಿಂಗಲ್ ನಂಬರ್ ಲಾಟರಿಗಳು ಮತ್ತೆ ತಲೆಯೆತ್ತಲಿವೆಯೇ ?ಹೌದು ಎನ್ನುತ್ತಿವೆ ಎಂಎಸ್ಐಎಲ್ನ ಉನ್ನತ ಮೂಲಗಳು.
ಸಿಂಗಲ್ ನಂಬರ್ ಲಾಟರಿಗಳನ್ನು ಪ್ರಾರಂಭಿಸಲು ಎಂಎಸ್ಐಎಲ್ ತೀವ್ರ ಉತ್ಸುಕವಾಗಿದ್ದು- ಈ ಕುರಿತು ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಮಾತುಕತೆ ಪ್ರಾರಂಭಿಸಿದೆ. ದಿನಕ್ಕೆ ಐದು ಸಲ ಸಿಂಗಲ್ ನಂಬರ್ ಲಾಟರಿಯ ಡ್ರಾ ನಡೆಸಲು ಉದ್ದೇಶಿಸಿರುವ ಎಂಎಸ್ಐಎಲ್- ಐದು ಲಾಟರಿಗಳಿಗೂ ಬೇರೆ ಬೇರೆ ಹೆಸರಿಡಲಿದೆ. ಈ ಪ್ರಸ್ತಾವನೆಗೆ ಸರ್ಕಾರದ ಒಪ್ಪಿಗೆ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಎಂಎಸ್ಐಎಲ್ ಮೂಲಗಳು ಹೇಳುತ್ತಿವೆ.
ಕೆಲವು ವರ್ಷಗಳ ಹಿಂದೆ ಎಂಎಸ್ಐಎಲ್ ನಡೆಸುತ್ತಿದ್ದ ಮೈಸೂರು ಲಕ್ಷ್ಮಿ ಎನ್ನುವ ಸಿಂಗಲ್ ನಂಬರ್ ದೈನಿಕ ಲಾಟರಿ ಭಾರೀ ಜನಪ್ರಿಯತೆ ಗಳಿಸಿತ್ತು . ಆದರೆ, ಸಿಂಗಲ್ ನಂಬರ್ ಲಾಟರಿಗಳ ವಿರುದ್ಧ ರಾಜ್ಯಾದ್ಯಂತ ವ್ಯಕ್ತವಾದ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೈಸೂರು ಲಕ್ಷ್ಮಿಯಾಂದಿಗೆ ಎಲ್ಲ ರಾಜ್ಯಗಳ ಸಿಂಗಲ್ ನಂಬರ್ ಲಾಟರಿಗಳನ್ನು ಸರ್ಕಾರ ನಿಷೇಧಿಸಿತ್ತು .
ಪ್ರಸ್ತುತ ಆನ್ಲೈನ್ ಲಾಟರಿಗೂ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಆದರೆ ಈ ಪ್ರತಿಭಟನೆಗೆ ಸೊಪ್ಪು ಹಾಕದ ಸರ್ಕಾರ, ಆನ್ಲೈನ್ ಲಾಟರಿಯಿಂದ ಬರುವ ಲಾಭದ ಹಣವನ್ನು ಶಾಲಾ ಮಕ್ಕಳ ಮಧ್ಯಾಹ್ನದ ಊಟಕ್ಕೆ ಬಳಸುವುದಾಗಿ ಸಬೂಬು ಹೇಳಿದೆ. ಸಿಂಗಲ್ ನಂಬರ್ ಲಾಟರಿ ಜಾರಿಗೆ ಬಂದಲ್ಲಿ , ಅದರ ಲಾಭದ ಹಣವನ್ನು ಸರ್ಕಾರ ಯಾವುದಕ್ಕೆ ಬಳಸುವುದೊ ? ಬಹುಶಃ ವಿಧವೆಯರ ಮಾಶಾಸನಕ್ಕಾಗಿ ಇರಬಹುದು !
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ