ಏಪ್ರಿಲ್ 26 ರಿಂದ ಸುದ್ದಿಮನೆ ಶೂರರ ಜಿದ್ದಾಜಿದ್ದಿ
ಬೆಂಗಳೂರು : ಪ್ರೆಸ್ಕ್ಲಬ್ ಆಫ್ ಬೆಂಗಳೂರು ಆಯೋಜಿತ ಅಂತರ ಮಾಧ್ಯಮ ವಾರ್ಷಿಕ ಕ್ರೀಡಾಕೂಟ ಏಪ್ರಿಲ್ 26ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.
‘ಟ್ರಿನಿಟಿ ಆಸ್ಪತ್ರೆ ಅಂತರ ಮಾಧ್ಯಮ ಕ್ರೀಡಾಕೂಟ’ದಲ್ಲಿ ವಿವಿಧ ಮಾಧ್ಯಮಗಳನ್ನು ಪ್ರತಿನಿಧಿಸುವ 350 ಮಂದಿ ಭಾಗವಹಿಸುವರು. ವಿವಿಧ ಕಾರಣಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ರದ್ದಾಗಿದ್ದ ಈ ಕ್ರೀಡಾಕೂಟ, ಈ ಬಾರಿ ಮತ್ತೆ ಪುನರ್ ಜೀವ ಪಡೆದಿದೆ. ಟ್ರಿನಿಟಿ ಆಸ್ಪತ್ರೆ ಮತ್ತು ಹೃದಯ ಕೇಂದ್ರವು ಕ್ರೀಡಾಕೂಟವನ್ನು ಪ್ರಾಯೋಜಿಸುತ್ತಿವೆ ಎಂದು ಪ್ರೆಸ್ಕ್ಲಬ್ನ ಕ್ರೀಡಾ ಸಮಿತಿಯ ಅಧ್ಯಕ್ಷ ವಿ.ಸನತ್ಕುಮಾರ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಕ್ರೀಡಾಕೂಟದಲ್ಲಿ - ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್, ಕೇರಂ, ಕ್ರಿಕೆಟ್ ಹಾಗೂ ಫುಟ್ಬಾಲ್ ಆಟಗಳ ವಿಭಾಗಗಳಿವೆ. ಕರ್ನಾಟಕ ಒಲಂಪಿಕ್ ಸಂಸ್ಥೆ , ಕರ್ನಾಟಕ ಕ್ರಿಕೆಟ್ ಸಂಸ್ಥೆ , ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಸೇರಿದಂತೆ ವಿವಿಧ ಕ್ರೀಡಾಸಂಸ್ಥೆಗಳು ಅಂತರ ಮಾಧ್ಯಮ ಕ್ರೀಡಾಕೂಟಕ್ಕೆ ಬೆಂಬಲ ಸೂಚಿಸಿವೆ.
ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಬಯಲು ಆಟಗಳಾದ ಕ್ರಿಕೆಟ್ ಹಾಗೂ ಫುಟ್ಬಾಲ್ಗಳನ್ನು ಪರಿಚಯಿಸಲಾಗುತ್ತಿದೆ ಎಂದು ಸನತ್ಕುಮಾರ್ ಹೇಳಿದರು.
ಏಪ್ರಿಲ್ 26ರ ಶನಿವಾರ ಕೆಜಿಎಸ್ ಕ್ಲಬ್ನಲ್ಲಿ ನಡೆಯುವ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಎನ್.ಧರಂಸಿಂಗ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸುವರು. ಏಪ್ರಿಲ್ 29ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಬಹುಮಾನಗಳನ್ನು ವಿತರಿಸುವರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...