2ನೇ ವಾರ: ತೀವ್ರತೆ ಕಳೆದುಕೊಂಡ ಲಾರಿ ಮುಷ್ಕರ
ಬೆಂಗಳೂರು: ದೇಶವ್ಯಾಪೀ ಲಾರಿ ಮುಷ್ಕರ ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆಯೇ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಮೂರು ರಾಜ್ಯಗಳಲ್ಲಿ ಟ್ರಕ್ ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದ್ದು ಅಂತರರಾಜ್ಯ ಹಾಗೂ ಜಿಲ್ಲಾ ಮಾರ್ಗಗಳಲ್ಲಿ ಭಾರೀ ಸರಕು ವಾಹನ ಸಂಚಾರದಲ್ಲಿ ತುಸು ಚೇತರಿಕೆ ಕಂಡು ಬಂದಿರುವುದಾಗಿ ಸಾರಿಗೆ ಆಯುಕ್ತ ತಿಮ್ಮೇಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಲ, ಆಂಧ್ರ ಮತ್ತು ಒರಿಸ್ಸಾಗಳಲ್ಲಿ ಟ್ರಕ್ ಮಾಲಕರು ಮುಷ್ಕರ ವಾಪಾಸ್ಸು ತೆಗೆದುಕೊಂಡಿದ್ದಾರೆ. ಹೆದ್ದಾರಿ ತೆರಿಗೆ ರದ್ದುಗೊಳಿಸಬೇಕು ಎಂಬ ಟ್ರಕ್ ಮಾಲಕರ ಬೇಡಿಕೆ ಈಡೇರಿಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ಬಿ. ಸಿ. ಖಂಡೂರಿ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಮುಷ್ಕರ ಇನ್ನೂ ಸಂಪೂರ್ಣ ನಿಂತಿಲ್ಲ.
ಕರ್ನಾಟಕದಲ್ಲಿ ಟ್ರಕ್ ಮುಷ್ಕರ ಹಿಂತೆಗೆದುಕೊಳ್ಳುವ ಬಗ್ಗೆ ಟ್ರಕ್ ಮಾಲಕರ ಸಂಘ ಮಂಗಳವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಈ ನಡುವೆ ರೈತರಿಗೆ ಅನುಕೂಲ ಕಲ್ಪಿಸಲು ಕೆಸ್ಸಾರ್ಟಿಸಿ, ಸರಕು ಸಾಗಣೆ ದರವನ್ನು ಪ್ರತಿ ಕಿ.ಮೀಗೆ 20 ಪೈಸೆ ಕಡಿತಗೊಳಿಸಿದೆ.
ಸರಕು ಸಾಗಿಸಲು ರೈತರು ಕೆಸ್ಸಾರ್ಟಿಸಿ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ಕೋರಲಾಗಿದೆ. ದೂರವಾಣಿ ಸಂಖ್ಯೆ : 080- 2870099, 2873377, ಮೊಬೈಲ್- 9844161197.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...