ಜೀವರಾಜ ಆಳ್ವ ಬುದ್ಧಿವಂತರೆಂಬುದು ಬರಿ ಓಳೆ ?
ಡಾ.ಜೀವರಾಜ ಆಳ್ವ ಚಾಣಾಕ್ಷ ರಾಜಕಾರಣಿಯೆ ?
ಆಳ್ವ ಚಾಣಾಕ್ಷ ರಾಜಕಾರಣಿ ಎನ್ನುವುದೊಂದು ಅಪದ್ಧ , ಆಳ್ವ ಚಾಣಾಕ್ಷ ರಾಜಕಾರಣಿ ಅಲ್ಲ ; ತಮ್ಮ ಕಾಲ ಮೇಲೆ ಚಪ್ಪಡಿ ಎಳೆದುಕೊಂಡವರನ್ನು ಚಾಣಾಕ್ಷ ರಾಜಕಾರಣಿ ಎನ್ನುವುದಾದರೂ ಹೇಗೆ ?- ಎಂದವರು ‘ಮನ್ವಂತರ’ ಖ್ಯಾತಿಯ ಟಿ.ಎನ್. ಸೀತಾರಾಂ.
ಸೀತಾರಾಂ ಅವರದೊಂದು ವಾದವಿದೆ. ಅದರ ಪ್ರಕಾರ- ಜೀವರಾಜ ಆಳ್ವ ಚಾಣಾಕ್ಷ ರಾಜಕಾರಣಿಯಲ್ಲ , ಅವರು ಹೃದಯವಂತ ರಾಜಕಾರಣಿ. ರಾಜಕಾರಣ ಮಾಡಿದವರು ಅಧಿಕಾರ ಪಡೆಯುತ್ತಾರೆ. ಆದರೆ, ಆಳ್ವ ಅಧಿಕಾರ ಪಡೆಯಲಿಲ್ಲ . ಅವರು ರಾಜ್ಯಾದ್ಯಂತ ಸಹಸ್ರಾರು ಯುವಕರ ಮನ ಗೆದ್ದರು. ಯುವ ಜನತೆಯ ಪಡೆ ಕಟ್ಟಿದರು.
ಆಳ್ವ ಅವರ ಕುರಿತು ಸೀತಾರಾಂ ತಮ್ಮ ಅಭಿಪ್ರಾಯ ಮಂಡಿಸಿದ್ದು , ಏಪ್ರಿಲ್ 18ರ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಆಳ್ವ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ .
ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಆಳ್ವ ಎಲ್ಲಾ ಜಾತಿಯವರನ್ನು ಸೂಜಿಗಲ್ಲಿನಂತೆ ಸೆಳೆದರು. ವ್ಯಕ್ತಿ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆಳ್ವ ಅವರಿಗೆ ಜಾತಿ ಮತದ ಬೇಲಿ ಇರಲಿಲ್ಲ ಎಂದು ಸೀತಾರಾಂ ಬಣ್ಣಿಸಿದರು.
ಆಳ್ವ ಅವರ ಸಂಘಟನಾ ಶಕ್ತಿಯನ್ನು ನೆನಪಿಸಿಕೊಂಡ ಅಖಿಲ ಭಾರತ ಜನತಾದಳದ ನಾಯಕ ಸೋಮಶೇಖರ್- ಸರ್ಕಾರಗಳ ನೀತಿ ಯುವಕರನ್ನು ಕಂಗೆಡಿಸಿದೆ. ಆದರೆ, ಈ ಕುರಿತು ಯಾರೂ ದನಿಯೆತ್ತುತ್ತಿಲ್ಲ ಎಂದು ವಿಷಾದಿಸಿದರು.
ಆಳ್ವ ಬೆಂಗಳೂರಿಗೆ ಮಾತ್ರ ಸೀಮಿತವಾಗಿರಲಿಲ್ಲ . ಉತ್ತರ ಕರ್ನಾಟಕದಲ್ಲೂ ಅವರು ಜನಪ್ರಿಯರಾಗಿದ್ದರು ಎಂದು ಜನತಾದಳದ ರಾಜ್ಯಾಧ್ಯಕ್ಷ ಸಿ.ಭೈರೇಗೌಡ ಅಗಲಿದ ಗೆಳೆಯನ ಗುಣಗಾನ ಮಾಡಿದರು.
ರಾಜಕಾರಣದಲ್ಲಿ ಜೀವರಾಜ ಆಳ್ವ ಅವರ ಸಹವರ್ತಿಗಳಾದ ಕೆ.ಎನ್.ನಾಗೇಗೌಡ, ಬಸವರಾಜ ರಾಯರೆಡ್ಡಿ , ವಿ.ಎಸ್.ಕೃಷ್ಣ ಆಯ್ಯರ್, ಬಿ.ಎ.ಮೊಹಿದ್ದೀನ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...