ಲಾರಿಸ್ಟ್ರೈಕ್: ಅಗತ್ಯ ವಸ್ತು ಪೂರೈಕೆಗೆ ಬದಲಿ ವ್ಯವಸ್ಥೆ
ಬೆಂಗಳೂರು : ಲಾರಿ ಮುಷ್ಕರವು ಸತತ ನಾಲ್ಕನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಅವಶ್ಯ ವಸ್ತುಗಳ ಪೂರೈಕೆಗಾಗಿ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾಗಿದೆ.
ಟೆಂಪೋ ಟ್ರ್ಯಾಕ್ಟರ್, ತ್ರಿಚಕ್ರ ವಾಹನ, ಪ್ರಯಾಣಿಕ ಸಾರಿಗೆ ಬಸ್ಗಳನ್ನು ಬಳಸಿಕೊಂಡು ತರಕಾರಿ, ಹಣ್ಣು ದಿನಸಿ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಆದರೂ ಹಣ್ಣು -ತರಕಾರಿಗಳ ಬೆಲೆ ಗಗನಕ್ಕೇರಿದ್ದು ಅಗತ್ಯ ವಸ್ತುಗಳೆಲ್ಲವೂ ತುಟ್ಟಿಯಾಗುತ್ತಿವೆ.
ಲಾರಿ ಮುಷ್ಕರದ ಮುನ್ಸೂಚನೆ ದೊರೆತಿರುವುದರಿಂದ ಅಗತ್ಯವಸ್ತು ಪೂರೈಕೆಗೆ ರಾಜ್ಯ ಸರಕಾರ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿತ್ತು. ಇದರಿಂದಾಗಿ ಜನ ಸಾಮಾನ್ಯರಿಗೆ ಲಾರಿ ಮುಷ್ಕರದ ಬಿಸಿ ತಟ್ಟುವುದು ತಡವಾಗಿತ್ತು. ಆದರೂ ಹಾಲು, ಅಡುಗೆ ಅನಿಲ ಮತ್ತು ಪೆಟ್ರೋಲಿಯಂ ಪೂರೈಕೆಯಲ್ಲಿ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಬಹುತೇಕ ಕಡೆಗಳಲ್ಲಿ ಹೆಚ್ಚಿನ ತೊಂದರೆಗಳಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಹಾಪ್ಕಾಮ್ಸ್ ಮಳಿಗೆಗಳ ಮೂಲಕ ಜನರಿಗೆ ಹಣ್ಣು ತರಕಾರಿ ತಲುಪಿಸಲಾಗುತ್ತಿದೆ. ಈರುಳ್ಳಿ,ಆಲೂಗಡ್ಡೆಯಂತಹ ತರಕಾರಿಗಳು ರೈಲುಗಳ ಮೂಲಕ ಹೊರ ರಾಜ್ಯಕ್ಕೆ ಕಳಿಸಲಾಗುತ್ತಿದೆ. ಲಾರಿ ಮುಷ್ಕರ ಮುಂದುವರೆದಿದ್ದರೂ ರಾಜ್ಯದಲ್ಲಿ ಅಗತ್ಯ ವಸ್ತುಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿರುವುದರಿಂದ ಗಾಬರಿಪಡಬೇಕಾಗಿಲ್ಲ ಎಂದು ಸಾರಿಗೆ ಆಯುಕ್ತ ಟಿ. ತಿಮ್ಮೇಗೌಡ ಹೇಳಿದ್ದಾರೆ.
ಅವಶ್ಯ ವಸ್ತುಗಳ ತೊಂದರೆ ಉಂಟಾದರೆ ಸಾರಿಗೆ ಇಲಾಖೆಯ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ಕೋರಲಾಗಿದೆ. ದೂರವಾಣಿ - 080- 2253717.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...