ಪೇಜಾವರ ಶ್ರೀಗಳಿಗೆ ಅಮೆರಿಕಾ ದಾಳಿ ಭಯ
ದಾವಣಗೆರೆ: ಇರಾಕ್ ಮೇಲೆ ದಾಳಿ ನಡೆಸಿದ ಮಾದರಿಯಲ್ಲಿಯೇ ಅಮೆರಿಕಾ ಭಾರತದ ಮೇಲೂ ದಾಳಿ ನಡೆಸಬಹುದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಸದ್ದಾಂ ಹುಸೇನ್ ಎಷ್ಟೇ ಕೆಟ್ಟವನಾಗಿರಬಹುದು. ಒಂದು ದೇಶದಲ್ಲಿನ ಆಡಳಿತ ವ್ಯವಸ್ಥೆ ಚೆನ್ನಾಗಿರಲಿ ಅಥವಾ ಕೆಟ್ಟು ಹೋಗಿರಲಿ, ಅದು ಆ ದೇಶದ ಆಂತರಿಕ ವಿಷಯ. ಇರಾಕ್ನ ಆಂತರಿಕ ವಿಷಯದಲ್ಲಿ ಅಮೆರಿಕಾ ಹಸ್ತಕ್ಷೇಪ ಮಾಡಿರುವುದು ಅತಿ ದೊಡ್ಡ ತಪ್ಪು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಅಮೆರಿಕಾ ಯುದ್ಧ ದಾಹವನ್ನು ಇತರ ರಾಷ್ಟ್ರಗಳು ಖಂಡಿಸಬೇಕು. ಅಮೆರಿಕಾ ಇದೇರೀತಿ ಮುಂದೆಯೂ ವರ್ತಿಸಿದಲ್ಲಿ ಸ್ವತಂತ್ರ ದೇಶಗಳ ಬಳಿ ಸ್ವಾತಂತ್ರ್ಯ ಉಳಿಯುವುದಿಲ್ಲ ಎಂದ ಸ್ವಾಮೀಜಿ, ಅಂತರರಾಷ್ಟ್ರೀಯ ಭಯೋತ್ಪಾದನೆಯ ಮುಂದೆ ಹಿಂದುತ್ವದ ಗಲಾಟೆ ಯಾವ ಲೆಕ್ಕಕ್ಕೂ ಇಲ್ಲ. ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆಯ ಕಡೆಗೆ ಅಮೆರಿಕಾ ಗಮನ ಹರಿಸಬೇಕು ಎಂದರು.
(ಇನ್ಪೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...