ವೀರಪ್ಪನ್ ಕಳಿಸಿದ ಕೆಸೆಟ್ಟುಗಳು ಕಳೆದು ಹೋದವಾ?
ಮೈಸೂರು : ಮಾಜಿ ಸಚಿವ ಎಚ್.ನಾಗಪ್ಪ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಸರ್ಕಾರ ಆದೇಶ ಕೊಡಬೇಕೆಂದು ಆಗ್ರಹಿಸಿ ಹೈಕೋರ್ಟ್ ಅಥವಾ ಸುಪ್ರಿಂಕೋರ್ಟ್ ಮೆಟ್ಟಿಲು ಹತ್ತಲು ನಾಗಪ್ಪನವರ ಮನೆಯವರು ನಿರ್ಧರಿಸಿದ್ದಾರೆ.
ವೀರಪ್ಪನ್ ತೆಕ್ಕೆಯಲ್ಲಿದ್ದಾಗ ನಿಗೂಢ ರೀತಿಯಲ್ಲಿ ನಾಗಪ್ಪ ಹತ್ಯೆಯಾಗಿತ್ತು. ಈ ಪ್ರಕರಣದ ನ್ಯಾಯಾಂಗ ತನಿಖೆಗೆ ಸರ್ಕಾರ ಈಗಾಗಲೇ ಆದೇಶ ಕೊಟ್ಟಿದೆ. ಆದರೆ, ಸತ್ಯ ಬಯಲಿಗೆಳೆಯಲು ಸಿಬಿಐ ತನಿಖೆಯಿಂದ ಮಾತ್ರ ಸಾಧ್ಯ ಎಂಬುದು ನಾಗಪ್ಪ ಅಳಿಯ ಡಾ.ಕಿರಣ್ ಪಾಟೀಲ್ ಪಟ್ಟು.
ರಾಜ್ಯ ಸರ್ಕಾರದ ಗೃಹ ಇಲಾಖೆ ಅಧಿಕಾರಿಗಳು ವೀರಪ್ಪನ್ನಿಂದ ಬಂದಿದ್ದ ಕೆಸೆಟ್ನ ಪ್ರತಿಗಳನ್ನು ಕೇಳಿದರು. ಅವರು ಹೇಳಿದ ಪ್ರಕಾರ ಸರ್ಕಾರದ ಬಳಿ ಇದ್ದ ಕೆಸೆಟ್ಗಳ ಮೂಲ ಪ್ರತಿಗಳು ಕಳೆದುಹೋಗಿವೆ. ಕೆಸೆಟ್ಗಳನ್ನೇ ಕಾಪಾಡಿಕೊಳ್ಳಲಾಗದ ಸರ್ಕಾರದಿಂದ ಸತ್ಯಾಂಶ ಬಯಲಿಗೆಳೆಯುವುದನ್ನು ನಿರೀಕ್ಷಿಸುವುದಾದರೂ ಹೇಗೆ? ಎಂದು ಕಿರಣ್ ಕೆಂಡಾಮಂಡಲಾದರು.
ನಾಗಪ್ಪ ಹತ್ಯೆ ಪ್ರಕರಣದ ಸಿಬಿಐ ತನಿಖೆ ನಡೆಸಬೇಕೆಂದು ಪರಿಮಳಾ ನಾಗಪ್ಪ ಸರ್ಕಾರಕ್ಕೆ ಪತ್ರದ ಮೂಲಕ ಒತ್ತಾಯಿಸಿದ್ದರು. ಗೃಹ ಸಚಿವಾಲಯದಿಂದ ಈ ಪತ್ರಕ್ಕೆ ಉತ್ತರ ಬಂದಿದ್ದು, ನ್ಯಾಯಾಂಗ ತನಿಖೆ ನಡೆಯುತ್ತಿರುವಾಗ ಸಿಬಿಐ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಹೀಗಾಗಿ ಈಗ ಹೈಕೋರ್ಟ್ ಅಥವಾ ಸುಪ್ರಿಂಕೋರ್ಟ್ ಮೆಟ್ಟಿಲು ಹತ್ತದೆ ವಿಧಿಯಿಲ್ಲ ಎಂದು ಕಿರಣ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ