ದಾವಣಗೆರೆಯ ಸಚಿವರು ಕೆಂಡದ ಮೇಲೆ ನಡೆದರು
ದಾವಣಗೆರೆ : ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರ ರಾಜಕೀಯ ದಾರಿ ತಣ್ಣಗಿದೆಯೋ ಇಲ್ಲವೋ... ಕಷ್ಟಗಳು ತಣ್ಣಗಾಗಲಿ ಎಂದು ಹರಕೆ ಹೊತ್ತ ಸಚಿವರು ಸೋಮವಾರ ರಾತ್ರಿ ವೀರಭದ್ರೇಶ್ವರ ದೇವರ ಪ್ರೀತ್ಯರ್ಥ ಸುಡುವ ನಿಗಿನಿಗಿ ಕೆಂಡದ ಮೇಲೆ ನಡೆದರು.
ದೇವರ ಮುಂದೆ ಸಚಿವರು ಮತ್ತು ಸಾಮಾನ್ಯ ಜನರ ನಡುವೆ ಯಾವುದೇ ಬೇಧ ಇರಲಿಲ್ಲ. ಭಕ್ತಾದಿಗಳ ಜೊತೆಗೇ ಸಚಿವರೂ ಕೆಂಡದ ಮೇಲೆ ನಡೆದರು. ಏಪ್ರಿಲ್ 16ರ ಬುಧವಾರದಿಂದ ವೀರ ಭದ್ರೇಶ್ವರ ದೇವರ ವಾರ್ಷಿಕ ಜಾತ್ರೆ ಆರಂಭವಾಗಿದ್ದು, ಅದಕ್ಕೂ ಮುನ್ನ ಕೆಂಡದ ಸೇವೆ ನಡೆಸುವುದು ಪ್ರತೀತಿ.
ಸಚಿವರು ಸಂಜೆ ಸುಮಾರು ಆರೂವರೆಗೆ ದೇವಸ್ಥಾನಕ್ಕೆ ಪತ್ನಿಯ ಜೊತೆಗೆ ಆಗಮಿಸಿದರು. ಸಾವಿರಾರು ಮಂದಿ ಭಕ್ತಾದಿಗಳ ಜೊತೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಂಭ್ರಮದಿಂದ ಹೊಸ ಬಟ್ಟೆ ಧರಿಸಿದ ಭಕ್ತಾದಿಗಳು ದೇವರನ್ನು ಪಲ್ಲಕಿ ಮೇಲೆ ಕೂರಿಸಿಕೊಂಡು ಉತ್ಸವ ನಡೆಸಿದರು .
ಪಲ್ಲಕಿ ಉತ್ಸವ ಕೊನೆಗೊಳ್ಳುತ್ತಲೇ ಕೆಂಡ ಸೇವೆ ಆರಂಭವಾಯಿತು. ಹರಕೆ ಹೇಳಿಕೊಂಡ ಹಲವಾರು ಭಕ್ತರು, ದೇವರ ಮೂರ್ತಿಯನ್ನು ತಲೆ ಮೇಲೆ ಹೊತ್ತು ದೇವರ ನಾಮ ಹೇಳಿಕೊಳ್ಳುತ್ತಾ ಕೆಂಡದ ಮೇಲೆ ನಡೆದರು. ಸಚಿವರು ಕೂಡ ತಮ್ಮ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಕೆಂಡದ ಮೇಲೆ ನಡೆದರು.
(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ