ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬಿಟಿ ಓಟದಲ್ಲಿ ರಾಜ್ಯದ ಸಾಧನೆ ದುಪ್ಪಟ್ಟಾಗಿದೆ’

By Staff
|
Google Oneindia Kannada News

ಬೆಂಗಳೂರು : ಇನ್ನು 3 ವರ್ಷಗಳಲ್ಲಿ ಕರ್ನಾಟಕದ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಅಂದಾಜು 1 ಸಾವಿರ ಕೋಟಿ ರುಪಾಯಿ ಬಂಡವಾಳ ಹರಿದುಬರಲಿದೆ ಎಂದು ಜೈವಿಕ ತಂತ್ರಜ್ಞಾನ ವಿಷನ್‌ ಗುಂಪಿನ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳವಾರ (ಏ.15) ಪ್ರಾರಂಭವಾದ ‘ಬೆಂಗಳೂರು ಬಯೋ- 2003’ ಮೇಳದ ಉದ್ಘಾಟನಾ ಸಮಾರಂಭದಲ್ಲಿ ‘ಜೈವಿಕ ಸಮೀಕ್ಷೆ- 2003’ ವರದಿಯನ್ನು ಕಿರಣ್‌ ಮಜುಂದಾರ್‌ ಮಂಡಿಸಿದರು. ಈವರೆಗೆ ರಾಜ್ಯದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ 750 ಸಾವಿರ ಕೋಟಿ ರುಪಾಯಿ ಬಂಡವಾಳ ವಿನಿಯೋಗಿಸಲಾಗಿದೆ. ಕಳೆದ ವರ್ಷವೊಂದರಲ್ಲೇ 22 ಹೊಸ ಕಂಪನಿಗಳು ಬಂಡವಾಳದಾರರಾಗಿದ್ದು, ಒಟ್ಟು 250 ಕೋಟಿ ರುಪಾಯಿ ಹಣ ಹೂಡಿದ್ದಾರೆ. ರಾಜ್ಯದಲ್ಲಿ ಈಗ ಒಟ್ಟು 84 ಜೈವಿತ ತಂತ್ರಜ್ಞಾನ ಕಂಪನಿಗಳಿವೆ ಎಂದು ಕಿರಣ್‌ ಹೇಳಿದರು.

ಬಿಟಿ ಯಶಸ್ಸು ಇಮ್ಮಡಿಯಾಗಿದೆ

ಸಾಕಷ್ಟು ಉದ್ಯೋಗಾವಕಾಶ ಕಲ್ಪಿಸುತ್ತಿರುವ ಈ ಕ್ಷೇತ್ರದಲ್ಲಿ ಒಟ್ಟು 8 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷವೊಂದರಲ್ಲೇ 3 ಸಾವಿರ ಪರಿಣತರಿಗೆ ಕೆಲಸ ಸಿಕ್ಕಿದೆ. ವೈಜ್ಞಾನಿಕ ಸಂಶೋಧಕರ ಸಂಖ್ಯೆ ಕೂಡ ಕಳೆದ ವರ್ಷ ದ್ವಿಗುಣಗೊಂಡಿದೆ.

ಬಿಟಿ ಕಂಪನಿಗಳಿಂದ 2002- 03ನೇ ಇಸವಿಯಲ್ಲಿ ಒಟ್ಟು 1,400 ಕೋಟಿ ರುಪಾಯಿ ಆದಾಯ ಬಂದಿದೆ. 2001- 02ನೇ ಇಸವಿಯಲ್ಲಿ ಆದಾಯ ಕೇವಲ 750 ಕೋಟಿ ರುಪಾಯಿಯಾಗಿತ್ತು. ಬಿಟಿ ಉತ್ಪನ್ನಗಳ ರಫ್ತು ಕೂಡ ದ್ವಿಗುಣಗೊಂಡಿದ್ದು, 2002-03ರಲ್ಲಿ 520 ಕೋಟಿ ರುಪಾಯಿ ಮೌಲ್ಯದ ಬಿಟಿ ಉತ್ಪನ್ನಗಳು ರಫ್ತಾಗಿವೆ. ಕಳೆದ ವರ್ಷ 45 ಬಿಟಿ ಕಂಪನಿಗಳು 141 ದೇಶೀ ಹಾಗೂ 63 ಅಂತರರಾಷ್ಟ್ರೀಯ ಪೇಟೆಂಟ್‌ಗಳನ್ನು ಕರ್ನಾಟಕದಲ್ಲಿ ಫೈಲ್‌ ಮಾಡಿವೆ ಎಂದು ಕಿರಣ್‌ ವರದಿ ಒಪ್ಪಿಸಿದರು. ಸಾಧನೆಯ ಈ ವರದಿಗೆ 20 ದೇಶಗಳ ಪ್ರತಿನಿಧಿಗಳ ಕರತಾಡನ ಗಿಟ್ಟಿತು.

ಬಿಟಿ ಪಾರ್ಕಿಗೆ ಕೆಸರುಗಲ್ಲು : ಇದಕ್ಕೂ ಮುಂಚೆ, ಮೇಳವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ , ಇಲೆಕ್ಟ್ರಾನಿಕ್‌ ನಗರಿಯಲ್ಲಿ ಜೈವಿಕ ತಂತ್ರಜ್ಞಾನ ಪಾರ್ಕ್‌ ‘ಬೆಂಗಳೂರು ಹೆಲಿಕ್ಸ್‌’ ಕಟ್ಟಡಕ್ಕೆ ಕೆಸರು ಕಲ್ಲು ಕೂಡ ಹಾಕಿದರು. 150 ಎಕರೆ ಜಾಗದಲ್ಲಿ ತಲೆಯೆತ್ತಲಿರುವ ಜೈವಿಕ ತಂತ್ರಜ್ಞಾನ ಪಾರ್ಕ್‌ಗೆ 150 ಕೋಟಿ ರುಪಾಯಿ ವೆಚ್ಚ ಮಾಡಲಾಗುವುದು. ನಿರ್ಮಾಣ ಕಾಮಗಾರಿ ಎರಡು ಹಂತದಲ್ಲಿ ನಡೆಯಲಿದೆ ಎಂದು ಕೃಷ್ಣ ಹೇಳಿದರು.

ಕಲುಷಿತ ನೀರನ್ನು ಶುದ್ಧಗೊಳಿಸುವ ಘಟಕ ಹಾಗೂ ವಿವಿಧ ಬಿಟಿ ಕಂಪನಿಗಳು ಬಿಟಿ ಪಾರ್ಕ್‌ನಲ್ಲಿ ಸ್ಥಾಪಿತಚಿವಾಗಲಿದ್ದು, ಆಧುನಿಕ ಜಗತ್ತಿನ ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ಕೊಡಲಿವೆ ಎಂದರು.

ಮೇಳದಲ್ಲಿ ಇರುವವರು : ಭಾರತದಲ್ಲಿರುವ ಫ್ರೆಂಚ್‌ ರಾಯಭಾರಿ ಡಾಮಿನಿಕ್‌ ಜಿರಾರ್ಡ್‌, ಕರ್ನಾಟಕ ಮಾಹಿತಿ ತಂತ್ರಜ್ಞಾನ ಸಚಿವ ಡಿ.ಬಿ.ಇನಾಂದಾರ್‌, ಮುಖ್ಯ ಕಾರ್ಯದರ್ಶಿ ಹಾಗೂ ಬಯೋ- ಮೆರಿಯಕ್ಸ್‌ ಏಲಿಯನ್‌ ಮೆರಿಯಕ್ಸ್‌ ಅಧ್ಯಕ್ಷ ಬಿ.ಎಸ್‌.ಪಾಟೀಲ್‌ ಸಮಾರಂಭದಲ್ಲಿ ಹಾಜರಿದ್ದರು. 20 ದೇಶಗಳ 201 ಕಂಪನಿಗಳು ಮೇಳದಲ್ಲಿ ಭಾಗವಹಿಸಿವೆ. ಚಂಡೀಗಢ, ಆಂಧ್ರಪ್ರದೇಶ ಸೇರಿದಂತೆ ಭಾರತದ ಐದು ರಾಜ್ಯಗಳ ಕಂಪನಿಗಳೂ ಮೇಳದಲ್ಲಿವೆ.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X