ಲಾರಿ ಮುಷ್ಕರದಿಂದ ತರಕಾರಿ ಮಾರುಕಟ್ಟೆಗೆ ಹೊಡೆತ
ಬೆಂಗಳೂರು : ಡೀಸೆಲ್ ಬೆಲೆ ನಿಯಂತ್ರಣದಲ್ಲಿಡಬೇಕು, ಮೌಲ್ಯವರ್ಧಿತ ತೆರಿಗೆ ಜಾರಿ ಕೂಡದು ಮತ್ತು ನಗರ ಪ್ರದೇಶದಲ್ಲಿ 15 ವರ್ಷ ಹಳೆಯ ವಾಹನಗಳನ್ನು ಸಂಚಾರಕ್ಕೆ ಬಿಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ರಾಷ್ಟ್ರಾದ್ಯಂತ ಶುರುವಾಗಿರುವ ಲಾರಿ ಮುಷ್ಕರದ ಬಿಸಿ ಮಾರುಕಟ್ಟೆಗಳಿಗೆ ತಟ್ಟಿದೆ.
ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಕರೆ ಕೊಟ್ಟಿರುವ ಮುಷ್ಕರಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಲಾರಿಗಳಿಂದ ಗಿಜಿಗುಡುತ್ತಿದ್ದ ಬೆಂಗಳೂರಿನ ವರ್ತುಲ ರಸ್ತೆಗಳು ಸೋಮವಾರ (ಏ.14) ಭಣಗುಡುತ್ತಿದ್ದವು. ಯಶವಂತಪುರದ ಆರ್ಎಂಸಿ ಯಾರ್ಡ್ನಲ್ಲಿ ಈರುಳ್ಳಿ, ಆಲೂಗಡ್ಡೆ ರಾಶಿರಾಶಿ ಬಿದ್ದು ಕೊಳೆಯುತ್ತಿದೆ. ಅದನ್ನು ಸಾಗಿಸಲು ವ್ಯಾಪಾರಿಗಳು ಹೆಣಗಾಡಿದರು. ಮಿನಿ ಲಾರಿ ಮತ್ತು ಟೆಂಪೋಗಳನ್ನು ಬಳಸಿಕೊಂಡು ಸಾಗಿಸಲು ಯತ್ನಿಸಿದಾಗ, ಕೆಲವು ಲಾರಿ ಮಾಲೀಕರು ಅದಕ್ಕೂ ಅಡ್ಡ ಹಾಕಿದರು.
ಹಾಲು, ನೀರು ಮತ್ತಿತರ ನಿತ್ಯ ಬಳಕೆಯ ವಸ್ತುಗಳ ಪೂರೈಕೆಗೆ ಅಡ್ಡಿ ಮಾಡದಂತೆ ಮುಷ್ಕರವನ್ನು ಮುಂದುವರೆಸುವುದಾಗಿ ಕರ್ನಾಟಕ ಲಾರಿ ಮಾಲೀಕರ ಸಂಘ ಭರವಸೆ ಕೊಟ್ಟಿದೆ. ಲಾರಿ ಸಂಚಾರಗಳು ಇಲ್ಲದ ಕಾರಣ ತಳ್ಳುವ ಗಾಡಿ, ಸರಕು ಆಟೋ, ಜಟಕಾಗಳಿಗೆ ಹಠಾತ್ ಬೇಡಿಕೆ ಬಂದಿತು. ಡೀಸೆಲ್ ಬಂಕುಗಳ ವ್ಯಾಪಾರ ಮಂಕಾಗಿತ್ತು.
ಈ ಅನಿರ್ದಿಷ್ಟಾವಧಿ ಮುಷ್ಕರ ನಾಳೆಯೂ ಮುಂದುವರೆಯಲಿದ್ದು, ಉದ್ದಿಮೆದಾರರಿಗೆ ನಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಅಂದಾಜಿನ ಪ್ರಕಾರ ಲಾರಿ ಮುಷ್ಕರದಿಂದಾಗಿ ಪ್ರತಿದಿನ ಸಾರಿಗೆ ಉದ್ಯಮಕ್ಕೆ 500 ಕೋಟಿ, ವಾಣಿಜ್ಯ ಸಂಸ್ಥೆ ಹಾಗೂ ಕೈಗಾರಿಕೆಗಳಿಗೆ 2000 ಕೋಟಿ ರುಪಾಯಿ ನಿವ್ವಳ ನಷ್ಟವಾಗಲಿದೆ. ಸರ್ಕಾರಕ್ಕೂ ಒಟ್ಟಾರೆ ಮುಷ್ಕದಿಂದ 12 ಸಾವಿರ ಕೋಟಿ ರುಪಾಯಿ ಲುಕಸಾನಾಗಲಿದೆ ಎನ್ನಲಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...