ರಾಜ್ಯದಲ್ಲಿ ನೀರಿನ ಸಮಸ್ಯೆಯಾ ? ಎಲ್ಲಿದೆ ?- ಸಚಿವ
ಬೆಂಗಳೂರು : ತ್ವರಿತ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ರಾಜ್ಯಕ್ಕೆ 22.5 ಕೋಟಿ ರುಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಹೆಚ್ಚುವರಿಯಾಗಿ 50 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು . ಆದರೆ, ಕೇಂದ್ರ ಸರ್ಕಾರ ಕೇವಲ 22.5 ಕೋಟಿ ರುಪಾಯಿಗಳನ್ನು ಮಾತ್ರ ನೀಡಿದೆ ಎಂದು ಗ್ರಾಮೀಣ ನೀರು ಸರಬರಾಜು ಸಚಿವ ಕೆ.ಬಿ.ಕೋಳಿವಾಡ್ ಮಂಗಳವಾರ (ಏ.8) ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದ ಯಾವುದೇ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಇದೆ ಎನ್ನುವುದನ್ನು ತಳ್ಳಿಹಾಕಿದ ಕೋಳಿವಾಡ್- ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪ್ರಸಕ್ತ ವರ್ಷ 4 ಸಾವಿರ ಬೋರ್ವೆಲ್ ಕೊರೆಸಲಾಗುವುದು ಎಂದರು. ದಿನವೊಂದಕ್ಕೆ ಪ್ರತಿ ವ್ಯಕ್ತಿಗೆ 20 ಲೀಟರ್ ನೀರು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ರಾಜ್ಯ ಸರ್ಕಾರದ ಮಳೆ ನೀರು ಸಂಗ್ರಹಿಸಿ ಬಳಸುವ ಜಲರಕ್ಷಣಾ ಯೋಜನೆಗೆ ಈಗಾಗಲೇ 1.28 ಲಕ್ಷ ಅರ್ಜಿಗಳು ಬಂದಿವೆ. ಈ ಯೋಜನೆಗೆ ತಗುಲುವ ವೆಚ್ಚದಲ್ಲಿ - ಮೂರನೇ ಎರಡು ಭಾಗವನ್ನು ಸರ್ಕಾರ ಭರಿಸಲಿದೆ. ಉಳಿದೊಂದು ಭಾಗವನ್ನು ಫಲಾನುಭವಿಗಳು ನೀಡಬೇಕು ಎಂದು ಸಚಿವ ಕೋಳಿವಾಡ್ ತಿಳಿಸಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ