ಟಿಪ್ಪು ಹುತಾತ್ಮನಾದ ದಿನ ಶ್ರೀರಂಗಪಟ್ಟಣದಿ ಕ್ರಾಂತಿಗೀತೆ
ಮೈಸೂರು : ಟಿಪ್ಪು ಹುತಾತ್ಮನಾದ ದಿನ, ಮೇ 4ರಂದು ಶ್ರೀರಂಗಪಟ್ಟಣದ ದರಿಯಾ ದೌಲತ್ನ ಹುಲ್ಲಿನಂಗಳದ ಮೇಲೆ ಕ್ರಾಂತಿ ಗೀತೆಗಳು ಮೊಳಗಲಿವೆ.
ಕರ್ನಾಟಕ ವಿಮೋಚನಾ ರಂಗ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಕೋಮು ಸೌಹಾರ್ದ ವೇದಿಕೆ ಬೆಂಬಲಿಸಿದೆ. ಕ್ರಾಂತಿಗೀತೆಗಳನ್ನು ಹಾಡುವುದರಲ್ಲಿ ಪಳಗಿರುವ ಬಲ್ಲದೀರ್ ಗದ್ದರ್ ಕಂಠ ಆ ದಿನ ಶ್ರೀರಂಗಪಟ್ಟಣದಲ್ಲಿ ಪ್ರತಿಧ್ವನಿಸಲಿದೆ. ಟಿಪ್ಪು ಸುಲ್ತಾನ್ ಗುಣಗಾನ ಮಾಡುವ ಹಾಡುಗಳಲ್ಲದೆ, ಕೋಮು ಸೌಹಾರ್ದತೆಯನ್ನು ಸಾರುವ ಗೀತೆಗಳನ್ನು ಗದ್ದರ್ ಹಾಡಲಿದ್ದಾರೆ. ಈ ಹಾಡುಗಳಿಗೆ ಕಂಠ ಸೇರಿಸಲು 25 ಸಾವಿರ ಸಹೃದಯರನ್ನು ಸೇರಿಸುವ ಉಮೇದಿ ವೇದಿಕೆಯದ್ದು. ಅದಕ್ಕಾಗಿ ವೇದಿಕೆ ಚುರುಕಾಗಿ ಕೆಲಸ ಮಾಡುತ್ತಿದೆ.
ಯುದ್ಧದ ಕರಾಳ ಛಾಯೆಯಿರುವ ಇವತ್ತಿನ ದಿನ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಸವಾಲು ನಮ್ಮ ಮುಂದಿದೆ. ಚಿಕ್ಕಮಗಳೂರಿನ ಬಾಬಾ ಬುಡನ್ಗಿರಿಯ ದತ್ತಪೀಠದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ್ ದಳ ಕೋಮು ಸೌಹಾರ್ದತೆ ಕದಡಲು ಯತ್ನಿಸಿದಾಗ ನಮ್ಮ 50 ಸಾವಿರ ಕಾರ್ಯಕರ್ತರು ಅದನ್ನು ಪ್ರತಿಭಟಿಸಿದೆವು. ದೊಡ್ಡಣ್ಣನಂತೆ ಆಡುವ ಅಮೆರಿಕದ ಸಮರ ಕಾಲುಕೆರೆಯುವಿಕೆಯನ್ನು ವಿರೋಧಿಸಬೇಕಿದೆ. ಸರ್ವ ಧರ್ಮ ಸಮನ್ವಯದ ಭಾವನೆ ಇಟ್ಟುಕೊಂಡಿದ್ದ ಟಿಪ್ಪೂ ಸುಲ್ತಾನ್ ಅವರ ವಿಚಾರಗಳನ್ನು ಸಾರಬೇಕಿದೆ ಎಂದು ಕರ್ನಾಟಕ ವಿಮೋಚನಾ ರಂಗದ ಮಂಡ್ಯ ನಾಯಕ ಎಂ.ಬಿ.ನಾಗಣ್ಣ ಗೌಡ ಹೇಳಿದರು.
ಟಿಪ್ಪೂ ಹುತಾತ್ಮ ದಿನಾಚರಣೆಯ ಮೂಲಕ ಯುದ್ಧ ಪ್ರತಿಭಟಿಸಲು ಮೈಸೂರು ಹಾಗೂ ಮಂಡ್ಯದಲ್ಲಿ ಜನರನ್ನು ಕಲೆಹಾಕಲು ಸ್ವಾತಂತ್ರ್ಯ ಹೋರಾಟಗಾರ ಸಿ.ಬಂಡಿಗೌಡ ಹಾಗೂ ಸಾಹಿತಿ ಎಚ್.ಎಲ್. ಕೇಶವಮೂರ್ತಿ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗಿದೆ. ಕನಿಷ್ಠ 25 ಸಾವಿರ ಜನರನ್ನು ಸೇರಿಸುತ್ತೇವೆ ಎನ್ನುವ ಬಂಡಿಗೌಡ ಬುದ್ಧಿ ಜೀವಿಗಳು ಹಾಗೂ ಸಾಹಿತಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ಕೊಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...