ಮಠ ಕಟ್ಟಿ ನೋಡು ; ಈಗ ತಿಗಳರ ಸರದಿ !
ಬೆಂಗಳೂರು : ತಿಗಳ ಜನಾಂಗದ ಮೊದಲ ಪೀಠಾಧಿಪತಿ ಶ್ರೀ ಜ್ಞಾನಾನಂದಪುರಿ ಬಸವ ಪ್ರಭು ಸ್ವಾಮೀಜಿ ಏಪ್ರಿಲ್ 9ರಂದು ಪೀಠಾರೋಹಣ ಮಾಡಲಿದ್ದಾರೆ.
ಪಟ್ಟಾಭಿಷೇಕ ಮಹೋತ್ಸವವು ಏಪ್ರಿಲ್ 7ರಿಂದ ಆರಂಭವಾಗಿದ್ದು , ಏಪ್ರಿಲ್ 9ರಂದು ಬಸವ ಪ್ರಭು ಸ್ವಾಮೀಜಿ ಪೀಠಾರೋಹಣ ಮಾಡುವರು. ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಪಟ್ಟಾಭಿಷೇಕ ಸಮಾರಂಭವನ್ನು ಉದ್ಘಾಟಿಸುವರು. ಸಿದ್ಧಗಂಗೆ, ಪೇಜಾವರ ಹಾಗೂ ಮುರುಘಾ ಮಠದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ತಿಗಳ ಜನಾಂಗದ ಮಠವೊಂದು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆರಂಭವಾಗುತ್ತಿದೆ. ತಿಗಳ ಜನಾಂಗದ ಮಠದ ಪ್ರಥಮ ಮಠಾಧೀಶರಾಗಿ ಗದ್ದುಗೆ ಏರುತ್ತಿರುವ ಬಸವ ಪ್ರಭು ಅವರು ಬಿಜಾಪುರ ಜ್ಞಾನ ಯೋಗಾಶ್ರಮದಲ್ಲಿ 12 ವರ್ಷಗಳ ಕಾಲ ವೇದ, ಸಿದ್ಧಾಂತಗಳನ್ನು ಅಭ್ಯಾಸ ಮಾಡಿದ್ದಾರೆ.
ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ತಿಗಳ ಸಮುದಾಯದ ಜನತೆಯ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಏಳಿಗೆಗೆ ಈ ಪೀಠ ಸ್ಥಾಪಿಸಲಾಗಿದೆ.
2004 ನೇ ಇಸವಿಯಲ್ಲಿ ಶಿವಗಂಗೆಯಲ್ಲಿ ವಸತಿ ಶಾಲೆಗಳನ್ನು ಸ್ಥಾಪಿಸಲಾಗುವುದು. ತಿಗಳ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದೇ ತಮ್ಮ ಮಠದ ಉದ್ದೇಶ ಎಂದು ನಿಯೋಜಿತ ಮಠಾಧೀಶ ಬಸವಪ್ರಭು ಸ್ವಾಮೀಜಿ ತಮ್ಮ ಕಾರ್ಯಭಾರದ ಕುರಿತು ಹೇಳಿಕೊಂಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...