ಪಿಯೂ ಪರೀಕ್ಷೆಗೆ ಕ್ಯಾಲ್ಕ್ಯುಲೇಟರ್: ಸಾಹಿತಿಗಳ ಕಿಡಿ
ಬೆಂಗಳೂರು : ಗುರುವಾರದಿಂದ (ಏ.3) ಶುರುವಾಗಿರುವ ದ್ವಿತೀಯ ಪಿಯೂಸಿ ಪರೀಕ್ಷೆಯ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಕ್ಯಾಲ್ಕ್ಯುಲೇಟರ್ ಬಳಕೆಗೆ ಅನುಮತಿ ಕೊಟ್ಟಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸಾಹಿತಿಗಳು ಕಿಡಿ ಕಾರಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯು ವಿಜ್ಞಾನ ಹಾಗೂ ಗಣಿತ ವಿಷಯಗಳ ಪರೀಕ್ಷೆಯಲ್ಲಿ ಲೆಕ್ಕಕ್ಕೆ ಸಂಬಂಧಿಸಿದಂತೆ ಕ್ಯಾಲ್ಯ್ಕುಲೇಟರ್ ಬಳಸಬಹುದು ಎಂದು ಹೇಳಿದೆ. ಆದರೆ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಗ್ರಾಮೀಣ ವಿದ್ಯಾರ್ಥಿಗಳು. ಇವರಲ್ಲಿ ಎಷ್ಟೋ ಮಕ್ಕಳು ಕ್ಯಾಲ್ಕ್ಯುಲೇಟರ್ ಮುಖವನ್ನೇ ನೋಡಿರುವುದಿಲ್ಲ. ಕೇವಲ ನಗರದ ವಿದ್ಯಾರ್ಥಿಗಳ ಅನುಕೂಲ ನೋಡಿಕೊಂಡು ಇಲಾಖೆ ತೆಗೆದುಕೊಂಡಿರುವ ತೀರ್ಮಾನದಿಂದ ಗ್ರಾಮೀಣ ಬಡ ಮಕ್ಕಳ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು.ಚನ್ನಬಸಪ್ಪ ದನಿ ಎತ್ತಿದ್ದಾರೆ.
ಈ ದನಿಗೆ ಸ್ಪಂದಿಸಿರುವ ಇತರೆ ಸಾಹಿತಿ ಹಾಗೂ ಸಂಶೋಧಕರು- ಪ್ರೊ. ಎಲ್.ಎಸ್.ಶೇಷಗಿರಿ ರಾವ್, ಡಾ.ಜಿ.ಎಸ್.ಶಿವರುದ್ರಪ್ಪ, ಡಾ. ಎಂ. ಚಿದಾನಂದ ಮೂರ್ತಿ, ಎಚ್.ಎಸ್.ಪಾರ್ವತಿ, ಡಾ.ಜಿ.ನಾರಾಯಣ, ಡಾ.ಕೆ.ಎಚ್.ಚೆಲುವರಾಜ್. ಇವರೆಲ್ಲಾ ಜಂಟಿ ಸುದ್ದಿ ಹೇಳಿಕೆ ಕೊಟ್ಟಿದ್ದು, ಶಿಕ್ಷಣ ಇಲಾಖೆಯ ತರಾತುರಿಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಕ್ಯಾಲ್ಕ್ಯುಲೇಟರ್ ಬಳಕೆಯನ್ನು ರದ್ದು ಪಡಿಸಿ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯ ತಪ್ಪಿಸಬೇಕು ಎಂದು ಈ ಸಾಹಿತಿಗಳು ಆಗ್ರಹಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...