ಈ ದೇವಳದಲ್ಲಿ ಮಹಾತ್ಮ ಗಾಂಧಿ ಕೂಡ ಒಬ್ಬ ದೇವರು !
ಪಾಟ್ನಾ : ಬಿಹಾರದಲ್ಲೂ ಕರ್ನಾಟಕದ ಹಾಗೇ ಗಾಂಧೀಜಿ ಪ್ರತಿಮೆಗಳು ಅಲ್ಲಲ್ಲಿ ಇವೆ. ಗಾಂಧೀ ಜಯಂತಿ ದಿನವಂತೂ ಎಲ್ಲಕ್ಕೂ ಹೂಮಾಲೆ ಗ್ಯಾರಂಟಿ. ಉಳಿದಂತೆ ಪ್ರತಿಮೆ ಇರುವ ಜಾಗದಲ್ಲಿ ಯಾವುದಾದರೂ ಸಮಾರಂಭ ನಡೆದರೆ ಗಾಂಧಿ ತಾತನಿಗೊಂದು ನಮಸ್ಕಾರ. ಇಲ್ಲವಾದರೆ ಆ ಪ್ರತಿಮೆಗಳಿಗೆ ಧೂಳು ಮುತ್ತಿರುತ್ತದೆ. ಇಂಥಾ ಬಿಹಾರದಲ್ಲಿ ಗಾಂಧಿ ದೇವರು ಇದ್ದಾರೆ ಅಂದರೆ ನಂಬುವಿರಾ?
ಪಾಟ್ನಾದ ಕಾಳಿ ದೇವಾಲಯದಲ್ಲೊಬ್ಬ ಭಗವಂತ. ಈತನ ಹೆಸರು ‘ಲಾಠಿಧಾರಿ ಭಗವಾನ್’. ಲಾಠಿ ಹಿಡಿದು ನಿಂತ ಈ ದೇವರು ಬೇರಾರೂ ಅಲ್ಲ, ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಿದ ಮಹಾತ್ಮ ಗಾಂಧೀಜಿ. ಇಲ್ಲಿ ಗಾಂಧೀಜಿ ಪ್ರತಿಮೆಗೆ ನಿತ್ಯವೂ ಪೂಜೆ. ಅಭಿಷೇಕ ಮಾಡುವವರೂ ಉಂಟು.
1948ರಲ್ಲಿ ಗಾಂಧೀಜಿ ಹತ್ಯೆಯಾದ ಎರಡೇ ದಿನದಲ್ಲಿ ಈ ದೇವಳದ ಹತ್ತಿರದ ಜಮೀನೊಂದರಲ್ಲಿ ಯಾರೋ ಗಾಂಧೀಜಿ ಭಕ್ತ ಅವರ ಪ್ರತಿಮೆಯನ್ನಿಟ್ಟು ಪೂಜಿಸಲು ಶುರುಮಾಡಿದ. ಆಮೇಲೆ ಜಮೀನಿನ ವಿಷಯಕ್ಕೆ ಜಗಳ ಶುರುವಾಗಿ, ಗಾಂಧೀಜಿ ಪ್ರತಿಮೆ ಹತ್ತಿರದ ಕಾಳಿ ದೇವಸ್ಥಾನಕ್ಕೆ ಶಿಫ್ಟಾಯಿತು. ಅವತ್ತಿನಿಂದ ಇವತ್ತಿನವರೆಗೆ ಜೋಗೇಂದರ್ ಪಾಸ್ವಾನ್ ಎಂಬ ಪೂಜಾರಿ ಗಾಂಧಿ ಪ್ರತಿಮೆಗೆ ತಪ್ಪದೆ ಹೂವಿಡುತ್ತಿದ್ದಾರೆ.
ಇಲ್ಲಿನ ಜನ ಮಹಾತ್ಮ ಗಾಂಧೀಜಿಗೆ ಪುನರ್ಜನ್ಮ ಇದೆ ಎಂದೇ ನಂಬಿದ್ದಾರೆ. ಆತ ಮತ್ತೆ ಹುಟ್ಟಿ ಬಂದು ಭ್ರಷ್ಟಾಚಾರ, ಹಿಂಸೆ ಮತ್ತು ಅನಾಚಾರಗಳನ್ನು ಬಡಿದೋಡಿಸುತ್ತಾನೆ ಅನ್ನೋದು ಜನರ ಅಚಲ ನಂಬಿಕೆ. ಹಾಗಾಗುವುದಾದರೆ, ಯಾಕಾಗಬಾರದು ಹೇಳಿ?
(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ