ಕೃಷ್ಣ ಮೇಲೆ 300 ಕೋಟಿ ರು. ‘ಔಷಧಿ ರಾಕೆಟ್ಟು ’!
ಬೆಂಗಳೂರು : ಔಷಧಿ ನಿಯಂತ್ರಣ ಕಚೇರಿ ಮೇಲೆ ಬುಧವಾರ (ಮಾ.26) ದಾಳಿ ನಡೆಸಿದ ಲೋಕಾಯುಕ್ತ ವೆಂಕಟಾಚಲ ಸುಮಾರು 300 ಕೋಟಿ ರುಪಾಯಿ ಅವ್ಯವಹಾರ ನಡೆದಿರುವುದನ್ನು ಬಯಲಿಗೆಳೆದರು. ಗುರುವಾರ ವಿಧಾನಸಭೆಯಲ್ಲಿ ಈ ವಿಷಯದ್ದೇ ಕೋಲಾಹಲ. ಇದರಲ್ಲಿ ಮುಖ್ಯಮಂತ್ರಿ ಕೃಷ್ಣ ಹಾಗೂ ಇಬ್ಬರು ಸಚಿವರು ಶಾಮೀಲಾಗಿರಬಹುದು ಎಂಬುದು ವಿರೋಧ ಪಕ್ಷದವರ ಶಂಕೆ.
ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ತನಿಖೆ ಮುಗಿಯುವವರೆಗೆ ಮುಖ್ಯಮಂತ್ರಿ ಕೃಷ್ಣ , ಆರೋಗ್ಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಮಾಲಕರೆಡ್ಡಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕರು ಸದನದಲ್ಲಿ ಧರಣಿ ಕೂತರು. ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ಜೋರಾಗಿ, ಚರ್ಚೆಗೆ ಎಡರಾದ್ದರಿಂದ ಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ ಕಲಾಪವನ್ನು ಸ್ವಲ್ಪ ಸಮಯ ಮುಂದೂಡಿದರು.
ಮತ್ತೆ ಸಭೆ ಶುರುವಾದಾಗ, ಔಷಧಿ ಹಗರಣದ ವಿಷಯದ ಚರ್ಚೆಗೆ ನಿಲುವಳಿ ಸೂಚನೆ ಕೊಡಬೇಕೆಂದು ಬಿಜೆಪಿಯ ನಾಯಕ ಜಗದೀಶ್ ಶೆಟ್ಟರ್ ಪಟ್ಟು ಹಿಡಿದರು. ಸಂಯುಕ್ತ ಜನತಾ ದಳದ ಮುಖಂಡರೂ ಬಿಜೆಪಿ ಪಟ್ಟನ್ನು ಬೆಂಬಲಿಸಿದರು. ಆದರೆ, ಸಭಾಧ್ಯಕ್ಷರು ನಿಲುವಳಿ ಸೂಚನೆ ಕೊಡಲು ಸಾಧ್ಯವಿಲ್ಲ ಎಂದರು.
ನ್ಯಾಯಾಂಗ ತನಿಖೆ ಅಗತ್ಯವಿಲ್ಲ : ಈಗಾಗಲೇ ಲೋಕಾಯುಕ್ತರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಹೀಗಿರುವಾಗ ನ್ಯಾಯಾಂಗ ತನಿಖೆ ನಡೆಸುವ ಅಗತ್ಯವಿಲ್ಲ. ಲೋಕಾಯುಕ್ತರು ಮಧ್ಯಂತರ ವರದಿಯಲ್ಲಿ ಏನು ಹೇಳುವರೋ ನೋಡೋಣ ಎಂದು ಆರೋಗ್ಯ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯಿಸಿದರು.
ತಪ್ಪಿತಸ್ಥರಿಗೆ ತಕ್ಕ ಶಾಸ್ತಿ : ಮಾಲಕರೆಡ್ಡಿ ಅವರದ್ದು ಶುಚಿ ಕೈಯಿ. ನಲವತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಹೆಸರು ಗಳಿಸಿದ್ದಾರೆ. ಅಂಥವರ ಮೇಲೆ ದಿಢೀರ್ ಆರೋಪ ಮಾಡುವುದು ಸರಿಯಲ್ಲ ಅನಿಸುತ್ತದೆ. ಲೋಕಾಯುಕ್ತರಿಂದ ಮಧ್ಯಂತರ ವರದಿ ಬರಲಿ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಕೃಷ್ಣ ಭರವಸೆ ಕೊಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ