ವಿಶ್ವ ಕಪ್ ಸೋಲಿಗೆ ಏನೂ ಹೇಳಲಾರೆ : ಕುಂಬ್ಳೆ
ಬೆಂಗಳೂರು : ಏಳನೇ ಬ್ಯಾಟ್ಸ್ಮನ್ ಆಗಿ ದಿನೇಶ್ ಮೊಂಗಿಯಾ ಅವರನ್ನು ಆಡಿಸುವ ಬದಲು ನಿಮಗೆ ಛಾನ್ಸ್ ಕೊಟ್ಟಿದ್ದರೆ ವಿಶ್ವಕಪ್ ಗೆಲ್ಲಿಸಿಕೊಡುತ್ತಿದ್ದಿರಾ ? ವಿಶ್ವ ಕಪ್ ಫೈನಲ್ಸ್ ಸೋಲಿಗೆ ಯಾರು ಕಾರಣ ? ಮುಂದೆ ನೀವೇನು ಮಾಡುವಿರಿ ?- ಈ ಯಾವ ಪ್ರಶ್ನೆಗಳಿಗೂ ಕರ್ನಾಟಕದ ಲೆಗ್ಗಿ ಅನಿಲ್ ಕುಂಬ್ಳೆ ಉತ್ತರ ಕೊಡಲಿಲ್ಲ.
ದಕ್ಷಿಣ ಆಫ್ರಿಕದಿಂದ ಬುಧವಾರ (ಮಾ.26) ಬೆಂಗಳೂರಿಗೆ ಬಂದಿಳಿದ ಕುಂಬ್ಳೆ ಮನೆಗೆ ಹೊರಡುವ ತರಾತುರಿಯಲ್ಲಿದ್ದರು. ‘ತಂಡದ ಸೋಲು- ಗೆಲುವಿನ ಬಗ್ಗೆ ನಾಯಕ ಸೌರವ್ ಗಂಗೂಲಿ ಮಾತ್ರ ಉತ್ತರ ಕೊಡಬೇಕು. ನಾನು ಕಾಂಟ್ರ್ಯಾಕ್ಟ್ನಲ್ಲಿದ್ದೇನೆ. ಏನೂ ಹೇಳಲಾರೆ. ಹೇಳಿದರೆ ತೊಂದರೆಯಾಗುತ್ತೆ’ ಎಂದಷ್ಟೆ ಹೇಳಿದರು.
ಇಂಗ್ಲೆಂಡಿನಲ್ಲಿ ಕೌಂಟಿ ಕ್ರಿಕೆಟ್ ಆಡೋಕೆ ಹೋಗುವಿರಾ ಎಂಬ ಪ್ರಶ್ನೆಗೆ, ‘ಸದ್ಯಕ್ಕೆ ಆ ಬಗ್ಗೆ ಏನೂ ತೀರ್ಮಾನಿಸಿಲ್ಲ’ ಎಂದು ಉತ್ತರಿಸಿದರು.
‘ಫೈನಲ್ಸ್ನಲ್ಲಿ ದಿನೇಶ್ ಮೊಂಗಿಯಾ ಜಾಗದಲ್ಲಿ ಅನಿಲ್ ಕುಂಬ್ಳೆ ಅವರನ್ನು ಆಡಿಸಬೇಕಿತ್ತು. ಆತ ಸಮಚಿತ್ತದ ಲೆಗ್ ಸ್ಪಿನ್ನರ್. ಜತೆಗೆ ಅನುಭವಿ. ಪಾರ್ಟ್ಟೈಮ್ ಬೌಲರ್ಗಳು ಆ ಪಂದ್ಯದಲ್ಲಿ 15 ಓವರ್ ಮಾಡಿ, ಚಚ್ಚಿಸಿಕೊಳ್ಳುವ ಅನಿವಾರ್ಯತೆ ಬಂದಿತು. ಒಂದು ವೇಳೆ ಕುಂಬ್ಳೆ ಇದ್ದಿದ್ದರೆ 10 ಓವರ್ಗಳು ನಿಸೂರಾಗಿರುತ್ತಿದ್ದವು. ಆಗ ಪಂದ್ಯದ ದಿಕ್ಕೇ ಬದಲಾಗಿರುತ್ತಿತ್ತೋ ಏನೋ’ ಎಂದು ಇಂಗ್ಲಿಷ್ ಪತ್ರಿಕೆಯ ಅಂಕಣವೊಂದರಲ್ಲಿ ಪಾಕಿಸ್ತಾನದ ವೇಗಿ ವಾಸಿಂ ಅಕ್ರಂ ಅಭಿಪ್ರಾಯ ಪಟ್ಟಿದ್ದಾರೆ.
ಕುಂಬ್ಳೆ ಮೊಗದಲ್ಲಿ ಉತ್ಸಾಹ ಕಳೆಗುಂದಿದ್ದು ಸ್ಪಷ್ಟವಾಗಿತ್ತು. ವಿಶ್ವಕಪ್ನಲ್ಲಿ ಕೇವಲ 3 ಪಂದ್ಯಗಳಲ್ಲಿ ಆಡಿದ ಕುಂಬ್ಳೆ 5 ವಿಕೆಟ್ ಕಿತ್ತಿದ್ದರು.
(ಪಿಟಿಐ)
ಇದನ್ನೂ
ಓದಿ-
ಮುಖಪುಟ
/
ಇವತ್ತು...
ಈ
ಹೊತ್ತು...