ಬೆಂಗಳೂರಲ್ಲಿ ಯುದ್ಧಕ್ಕೆ ವಿರೋಧ, ಗಾಳಿಯಲ್ಲಿ ಗುಂಡು
ಬೆಂಗಳೂರು : ಇರಾಕಿನ ಮೇಲೆ ಅಮೆರಿಕಾ ಯುದ್ಧ ಹೇರಿರುವುದನ್ನು ವಿರೋಧಿಸಿ ನಗರದ ಸಿಟಿ ಮಾರ್ಕೆಟ್ ಪ್ರದೇಶದಲ್ಲಿ ಮುಸ್ಲಿಮರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಉಂಟಾದ ಬಿಗು ವಾತಾವರಣವನ್ನು ತಿಳಿಗೊಳಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.
ಮುಸ್ಲಿಮರ ಪವಿತ್ರ ದಿನವಾದ ಶುಕ್ರವಾರ, ಮಸೀದಿಯಲ್ಲಿ ನಮಾಜು ಮುಗಿಸಿ ಬಂದ ಒಂದು ಗುಂಪು ಇರಾಕಿನ ಮೇಲೆ ದಾಳಿ ನಡೆಸಿರುವ ಅಮೆರಿಕ ವಿರುದ್ಧ ಘೋಷಣೆಗಳನ್ನು ಕೂಗಿತು. ಈ ಗುಂಪು ಕಲ್ಲು ತೂರಾಟದಲ್ಲಿ ತೊಡಗಿದ್ದರಿಂದ ಸಿಟಿ ಮಾರ್ಕೆಟ್ ಪ್ರದೇಶದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು .
ಹಿಂಸಾಚಾರದಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಮೊದಲಿಗೆ ಲಾಠಿ ಪ್ರಹಾರ ನಡೆಸಿದ ಪೊಲೀಸರು, ಆನಂತರ ಪರಿಸ್ಥಿತಿಯನ್ನು ತಹಬಂದಿಗೆ ತರಲು ಗಾಳಿಯಲ್ಲಿ ಗುಂಡು ಹಾರಿಸಿದರು.
ಪೊಲೀಸರಿಗೆ ಗಾಯ : ಕಲ್ಲು ತೂರಾಟದಲ್ಲಿ 15 ಬಸ್ಸುಗಳು ಸೇರಿದಂತೆ ಅನೇಕ ವಾಹನಗಳು ಜಖಂಗೊಂಡಿವೆ. ಮಾರ್ಕೆಟ್ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಹಾಗೂ ಪೊಲೀಸರಿಗೆ ಗಾಯಗಳಾಗಿವೆ.
ಗಲಭೆ ಸಂಭವಿಸಿದ ಸ್ಥಳದಲ್ಲಿ ಇನ್ನೂ ಬಿಗು ವಾತಾವರಣವಿದ್ದು ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...