ಅಟಲ್ ಪದ್ಯಗಳ ಕೆಸೆಟ್ಟಿಗೆ ಜಾಹೀರಾತುದಾರರಿಲ್ಲ !
ಠಾಣೆ : ಅಟಲ್ ಬಿಹಾರಿ ವಾಜಪೇಯಿ ಅವರ ಕವನಗಳ ಆಡಿಯೋ ಕೆಸೆಟ್ಟು ಹಾಗೂ ಕವನಗಳನ್ನಾಧರಿಸಿ ತೆಗೆದಿರುವ ವಿಡಿಯೋ ಕೆಸೆಟ್ಟುಗಳ ಬಿಕರಿಗೆ ಪ್ರಾಯೋಜಕರೇ ಸಿಗುತ್ತಿಲ್ಲ.
ಎಸ್.ಎಲ್. ಜಿ. ಮಾತೋಶ್ರೀ ಕಲಾಕಾರ್ ಪುರಸ್ಕಾರ್ ಪ್ರಶಸ್ತಿ ಸ್ವೀಕರಿಸಿದ ನಾಟಕಕಾರ ಹಾಗೂ ಜಾಹೀರಾತು ಸಿನಿಮಾಕಾರ ಭರತ್ ಡಭೋಲ್ಕರ್ ಅಟಲ್ ಅವರ ಕವನಗಳನ್ನು ವಿಡಿಯೋ ಕೆಸೆಟ್ಟಾಗಿಸಿದ್ದಾರೆ.
‘ಉನ್ಕೀ ಯಾದ್ ಕರೇಂ’ ಎಂಬೊಂದು ಕವನವನ್ನು ವಾಜಪೇಯಿ ದೇಶ ರಕ್ಷಕರ ಕುರಿತು ಬರೆದಿದ್ದಾರೆ. ಅದನ್ನು ಶೂಟ್ ಮಾಡುತ್ತಿದ್ದ ಸಂದರ್ಭದಲ್ಲಿ ವಾಜಪೇಯಿ ಬಂದಿದ್ದರು. ಹಾಡಿನ ಒಂದು ಸಾಲನ್ನು ನಾವು ಅಕಸ್ಮಾತ್ತಾಗಿ ಬಿಟ್ಟುಬಿಟ್ಟಿದ್ದೆವು. 20 ವರ್ಷಗಳ ಹಿಂದೆ ತಾವು ಬರೆದಿದ್ದ ಕವನದ ಆ ಸಾಲು ಇಲ್ಲದ್ದನ್ನು ಖುದ್ದು ವಾಜಪೇಯಿ ನಮ್ಮ ಗಮನಕ್ಕೆ ತಂದರು. ಬರೆದ ಸಾಲನ್ನು ಕವಿ ಹೃದಯ ಯಾವತ್ತೂ ಮರೆಯುವುದಿಲ್ಲ ಎಂಬುದಕ್ಕೆ ಅಟಲ್ ಅವರೇ ಸಾಕ್ಷಿ ಎಂದು ಡಭೋಲ್ಕರ್ ಹೇಳಿದರು.
ಡಭೋಲ್ಕರ್ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗೆ ವಾಜಪೇಯಿ ಕವನಗಳ ಆಡಿಯೋ ಹಾಗೂ ವಿಡಿಯೋ ಕೆಸೆಟ್ಟುಗಳು ಮಾರುಕಟ್ಟೆಗೆ ಬರಬೇಕಿತ್ತು. ಆದರೆ, ಸ್ವಾಭಿಮಾನಿ ಡಭೋಲ್ಕರ್ ಕೆಸೆಟ್ಟಿನ ಮಾರುಕಟ್ಟೆಗೆ ರಾಜಕಾರಣಿ ವಾಜಪೇಯಿಯವರ ಶಿಫಾರಸ್ಸನ್ನು ಬಳಸಿಕೊಳ್ಳಲು ಸಿದ್ಧರಿಲ್ಲ. ನಾನು ಜನಕ್ಕೆ ಮುಟ್ಟಿಸಲು ಹೊರಟಿರುವುದು ಕವಿ ವಾಜಪೇಯಿಯವರನ್ನ. ಯಾರಾದರೂ ಸಹೃದಯಿ ಜಾಹೀರಾತುದಾರರು ಸಿಕ್ಕೇ ಸಿಗುತ್ತಾರೆಂಬ ಭರವಸೆಯಿದೆ ಎಂದು ಡಭೋಲ್ಕರ್ ನಕ್ಕರು.
(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ