ಚೌಡಯ್ಯ ಸ್ಮಾರಕ ಭವನದಲ್ಲಿ ಶಿವರಾತ್ರಿ ನಗೆಜಾಗರಣೆ
ಬೆಂಗಳೂರು : ಮಾರ್ಚ್ 1, ಶಿವರಾತ್ರಿಯ ದಿನ ಅಕಾಡೆಮಿ ಆಫ್ ಮ್ಯೂಸಿಕ್ ಜಾಣ- ಜಾಣೆಯರ ನಗೆ ಜಾಗರಣೆ ಕಾರ್ಯಕ್ರಮ ಏರ್ಪಡಿಸಿದೆ.
ಸಂಜೆ 6.15ಕ್ಕೆ ಶುರುವಾಗುವ ನಗೆ ಜಾಗರಣೆ ಮರುದಿನ ಬೆಳಗಿನ ಜಾವದವರೆಗೆ ನಡೆಯಲಿದೆ. ನಗೆಯ ಬಾಣಬಿರುಸುಗಳು ಪ್ರೇಕ್ಷಕರ ಮನ ತಣಿಸಲಿವೆ ಎಂದು ಅಕಾಡೆಮಿ ಪರವಾಗಿ ಕಚಗುಳಿಕಾರ ಪ್ರೊ.ಅ.ರಾ.ಮಿತ್ರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಕುಮಾರಿ ಜಯಲಲಿತಾ’ ಜೊತೆ ಮಾಸ್ಟರ್ ಹಿರಣ್ಣಯ್ಯ ವಾಗ್ವಾದ, ಮಿಮಿಕ್ರಿ ದಯಾನಂದರ ಮಿಮಿಕ್ ಕಚಗುಳಿ, ಪಾಪ ಪಾಂಡು ಖ್ಯಾತಿಯ ಎಂ.ಎಸ್.ನರಸಿಂಹ ಮೂರ್ತಿ, ಪ್ರೊ। ಕೃಷ್ಣೇಗೌಡ, ಹಿರೇಮಗಳೂರು ಕಣ್ಣನ್, ಅಸದುಲ್ಲಾ ಬೇಗ್ ವಿವಿಧ ಹಾಸ್ಯ ಕಾರ್ಯಕ್ರಮ ನೀಡಲಿದ್ದಾರೆ. ಕುಂಚ ಕಲಾವಿದ ಬಿ.ಕೆ.ಎಸ್.ವರ್ಮಾ ಹಾಸ್ಯದ ಸನ್ನಿವೇಶಗಳನ್ನು ನಿಂತಲ್ಲೇ ಕೆಲವೇ ಕ್ಷಣದಲ್ಲಿ ಚಿತ್ರವಾಗಿಸಲಿದ್ದಾರೆ. ಭದ್ರಗಿರಿ ಅಚ್ಯುತದಾಸರಿಂದ ಶಿವಲಾಸ್ಯ ಹಾಗೂ ಆರ್.ಪದ್ಮರಾವ್ ಮತ್ತು ಸಂಗಡಿಗರ ಸಂಗೀತ ಹಾಸ್ಯದ ಜೊತೆಗೆ ಕಿವಿಗಿಂಪು.
ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮಕ್ಕೆ ಬೇಕಾದ ಪಾಸುಗಳನ್ನು ಪಡೆಯಬಹುದು. ಭವನದ ಹೊರಗೆ ಎರಡು ದೊಡ್ಡ ಪರದೆಗಳನ್ನು ಹಾಕಿ, ಅದರಲ್ಲೂ ಕಾರ್ಯಕ್ರಮವನ್ನು ಕಾಣುವಂತೆ ಮಾಡಲಾಗುವುದು ಎಂದು ಅ.ರಾ.ಮಿತ್ರ ಹೇಳಿದರು. ಅಂದಹಾಗೆ, ಅ.ರಾ.ಮಿತ್ರ ಕೂಡ ಕಾರ್ಯಕ್ರಮದಲ್ಲಿ ತಪ್ಪದೆ ಕಚಗುಳಿ ಇಡಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...