ಅಜೀಂ ಅಧ್ಯಕ್ಷತೆಯಲ್ಲಿ ಹಾರ್ಡ್ವೇರ್ ಕಾರ್ಯ ಪಡೆ
ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಕ್ಕ ದೂರದೃಷ್ಟಿ ಒದಗಿಸುವ ಸಲುವಾಗಿ ಕರ್ನಾಟಕ ಸರ್ಕಾರ ಹಾರ್ಡ್ವೇರ್ ಕಾರ್ಯ ಪಡೆಯನ್ನು ರಚಿಸಿದೆ. ವಿಪ್ರೋ ಅಧ್ಯಕ್ಷ ಅಧ್ಯಕ್ಷ ಅಜೀಂ ಪ್ರೇಂಜಿ ಈ ಪಡೆಯ ಅಧ್ಯಕ್ಷ ಗಾದಿಯಲ್ಲಿದ್ದಾರೆ.
ಸಾಫ್ಟ್ವೇರ್ನಲ್ಲಿನ ಅಭಿವೃದ್ಧಿಯ ಗ್ರಾಫನ್ನು ಹಾಗೇ ಏರಿಸುತ್ತಾ ಅದಕ್ಕೆ ಪೂರಕವಾಗಿ ಹಾರ್ಡ್ವೇರ್ ಕ್ಷೇತ್ರ ಕೂಡ ಬೆಳೆಯಬೇಕು. ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಕ್ಷೇತ್ರಕ್ಕೆ ಭಾರತೀಯ ಹಾರ್ಡ್ವೇರ್ ಅನನ್ಯ ಕಾಣಿಕೆ ಕೊಡಬೇಕು. ಯಥಾಪ್ರಕಾರ ಮಾಹಿತಿ ತಂತ್ರಜ್ಞಾನ ಅಂದೊಡನೆ ಜಗತ್ತಿನ ಕಣ್ಣು ಕರ್ನಾಟಕದತ್ತ ನೆಡುತ್ತಿದೆ. ಹೀಗಾಗಿ ಹಾರ್ಡ್ವೇರ್ ಕಾರ್ಯ ಪಡೆಯನ್ನು ರಚಿಸಿದ್ದೇವೆ ಎಂದು ರಾಜ್ಯಪಾಲ ಟಿ.ಎನ್. ಚತುರ್ವೇದಿ ವಿಧಾನಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ಗುರುವಾರ (ಫೆ.27) ಮಾಡಿದ ಭಾಷಣದಲ್ಲಿ ಹೇಳಿದರು.
ಸದ್ಯದಲ್ಲೇ ಪುನರ್ ವಿಮರ್ಶಿತ ಜವಳಿ ನೀತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಲಿದೆ. ಇದಲ್ಲದೆ ಜಾಗತೀಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ರೇಷ್ಮೆ ಉದ್ದಿಮೆಯ ಅಭಿವೃದ್ಧಿಗೆ ಒತ್ತು ಕೊಡಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ‘ರೇಷ್ಮೆ ಹುಳ, ಬೀಜ, ಗೂಡು ಹಾಗೂ ರೇಷ್ಮೆ ಎಳೆ ಕಾಯ್ದೆ- 1959’ಕ್ಕೆ ತಿದ್ದುಪಡಿ ತರುವ ಪ್ರಸ್ತಾವನೆಯಿದೆ. ಬೆಂಗಳೂರು ಸಮೀಪ 100 ಎಕರೆ ಜಾಗದಲ್ಲಿ ವಿಜ್ಞಾನ ನಗರಿ ಹಾಗೂ ಬಾಹ್ಯಾಕಾಶ ಮ್ಯೂಸಿಯಂ ಸ್ಥಾಪಿಸುವ ಮತ್ತು ಧಾರವಾಡದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯುವ ಪ್ರಸ್ತಾವನೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮುಂದಿಟ್ಟಿದೆ ಎಂದು ಚತುರ್ವೇದಿ ತಿಳಿಸಿದರು.
ನಗರ ವ್ಯಾಪ್ತಿಯ ಜಾಗೆಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಬಳಕೆಯ ದೃಷ್ಟಿಯಿಂದ ನಗರ ಪಾಲಿಕೆಗಳಲ್ಲಿ ನಕಾಶೆ ಯೋಜನೆಯನ್ನು ಜಾರಿಗೆ ತರಲಾಗುವುದು. ಇದಕ್ಕೆ 100 ರುಪಾಯಿ ವೆಚ್ಚವಾಗಲಿದೆ ಎಂದರು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ