ಅವಳಿ ನಗರದಲ್ಲಿ ಸೊಳ್ಳೆಗಳ ಕಾಟ, ಡೆಂಗ್ಯೂ ಭೀತಿ
ಹುಬ್ಬಳ್ಳಿ/ಧಾರವಾಡ : ಅವಳಿ ನಗರದ ನಿವಾಸಿಗಳಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಡೆಂಗ್ಯೂ ಜ್ವರದ ಭೀತಿ ಕಾಡುತ್ತಿದೆ. ಈ ಬಾರಿ ಜ್ವರದ ಭೀತಿ ಎರಡು ತಿಂಗಳು ಮುನ್ನವೇ ಶುರುವಾಗಿದೆ.
ಕಳೆದೆರಡು ವಾರಗಳಿಂದ ಅವಳಿ ನಗರಗಳಲ್ಲಿ ವಿಪರೀತ ಸೊಳ್ಳೆಗಳ ಕಾಟ. ಜೊತೆಗೆ ಸುಡಸುಡ ಧಗೆ. ಸ್ಥಳೀಯ ಆಡಳಿತಕ್ಕೆ ಸೊಳ್ಳೆಗಳ ಕಾಟವನ್ನು ತಡೆಗಟ್ಟಬೇಕೆಂದು ಎರಡು ವಾರದಲ್ಲಿ 50 ದೂರರ್ಜಿಗಳು ಬಂದಿವೆ. ಕ್ರಿಮಿನಾಶಕಗಳನ್ನು ಸಿಂಪರಿಸುವ ಕೆಲಸವನ್ನು ಆಡಳಿತ ನಡೆಸುತ್ತಿದೆಯಾದರೂ, ಸೊಳ್ಳೆಗಳು ಅದಕ್ಕೆ ಜಗ್ಗುತ್ತಿಲ್ಲ ಎಂಬುದು ಸ್ಥಳೀಯರ ಅಳಲು.
ವೈದ್ಯರ ಪ್ರಕಾರ, ಗಣನೀಯವಾಗಿ ಹೆಚ್ಚುತ್ತಿರುವ ಉಷ್ಣತೆ ಮತ್ತು ಕೆಲವು ಚರಂಡಿಗಳಲ್ಲಿ ನೀರು ನಿಲ್ಲುತ್ತಿರುವುದು ಸೊಳ್ಳೆಗಳ ಸಂಖ್ಯೆ ಏರಲು ಕಾರಣವಾಗಿದೆ. ಸಾಮಾನ್ಯವಾಗಿ ಬೇಸಗೆಯ ಅಧಿಕ ಉಷ್ಣತೆಯ ದಿನಗಳಲ್ಲಿ ಡಜನ್ನುಗಟ್ಟಲೆ ಜನ ಡೆಂಗ್ಯೂ ಜ್ವರದಿಂದ ಬಳಲುವುದು ಇಲ್ಲಿ ಸಾಮಾನ್ಯ. ಅನೇಕರು ಈ ರೋಗದಿಂದ ಸಾಯುವುದೂ ಉಂಟು.
ಎಂದೋ ದಾಸ್ತಾನು ಮಾಡಿಟ್ಟುಕೊಂಡ ಕ್ರಿಮಿನಾಶಕ ಸಿಂಪರಿಸುವುದರಿಂದ ಏನೂ ಪ್ರಯೋಜನವಾಗುತ್ತಿಲ್ಲ ಎನ್ನುವ ವೈದ್ಯರು, ಈಗ ಮಳೆರಾಯನೇ ಜನರನ್ನು ಕಾಪಾಡಬೇಕು ಎಂದು ನಿಡುಸುಯ್ಯುತ್ತಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...