ಅಮ್ಮ ಜಯಾ ಜನುಮ ದಿನಕ್ಕೆ ಭಕ್ತನ ಬೆರಳ್ ಕಾಣಿಕೆ !
ಚೆನ್ನೈ : ಅಮ್ಮ ಜಯಲಲಿತಾ ನೂರ್ಕಾಲ ಬದುಕಲಿ ಎಂದು ಪ್ರಾರ್ಥಿಸಿ ಜಡಯನೂರಿನ ಎಐಎಡಿಎಂಕೆ ಕಾರ್ಯದರ್ಶಿ ಗುಣಶೇಖರನ್ ತನ್ನ ಕಿರು ಬೆರಳನ್ನೇ ಕತ್ತರಿಸಿ ಅಯ್ಯಪ್ಪನ ದೇವಸ್ಥಾನದ ಹುಂಡಿಗೆ ಹಾಕಿದ್ದಾನೆ !
ಫೆಬ್ರವರಿ 24, ಸೋಮವಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹುಟ್ಟುಹಬ್ಬ. ವೆಲ್ಲೂರು ಜಿಲ್ಲೆಯ ತಿರುಪತ್ತೂರು ಬಳಿಯ ಕುರಿಸವೈಪಟ್ಟು ಗ್ರಾಮದ ನಿವಾಸಿ ಗುಣಶೇಖರನ್ (40) ಅಯ್ಯಪ್ಪ ದೇವರ ಹಾಗೂ ಜಯಾ ಪರಮ ಭಕ್ತ. ಹೀಗಾಗಿ ಕುಡುಗೋಲಿಂದ ತನ್ನ ಬಲಗೈಯ ಕಿರು ಬೆರಳನ್ನು ಕತ್ತರಿಸಿ, ಅದನ್ನು ವಿಭೂತಿಯಲ್ಲಿ ಮುಚ್ಚಿ ಅಯ್ಯಪ್ಪನ ಗುಡಿಯ ಹುಂಡಿಗೆ ಹಾಕಿ, ಸುಮ್ಮನಾಗಿಬಿಟ್ಟಿದ್ದಾನೆ.
ಸ್ವಲ್ಪ ಹೊತ್ತಿನ ನಂತರ ಕೆಲವು ಎಐಎಡಿಎಂಕೆ ಕಾರ್ಯಕರ್ತರಿಗೆ ಗುಣಶೇಖರ ಭಕ್ತನ ಬೆರಳ್ ಕಾಣಿಕೆಯ ವಿಷಯ ಗೊತ್ತಾಗಿದೆ. ಅದು ಅಮ್ಮ ಜಯಲಲಿತಾ ಪಡಸಾಲೆ ಮುಟ್ಟಿದ್ದೇ ತಡ, ಗುಣಶೇಖರನನ್ನು ಅಪೋಲೋ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಿರಿ ಅಂತ ಆಕೆ ಆದೇಶವಿತ್ತಿದ್ದಾರೆ.
ಸದ್ಯಕ್ಕೆ ಗುಣಶೇಖರ ಅಪೋಲೋ ಆಸ್ಪತ್ರೆಯ ಹಾಸಿಗೆ ಮೇಲೆ ಹಾಯಾಗಿ ಮಲಗಿದ್ದಾರೆ. ತಾನು ಕಾಣಿಕೆಯಾಗಿ ಕೊಟ್ಟಿರುವ ಬೆರಳನ್ನು ಯಾವುದೇ ಕಾರಣಕ್ಕೂ ಮತ್ತೆ ಜೋಡಿಸಿಕೊಳ್ಳಲು ಆತ ತಯಾರಿಲ್ಲ. ಪ್ಲಾಸ್ಟಿಕ್ ಸರ್ಜರಿ ತಜ್ಞರು ಸೂಕ್ತ ಬೆರಳಿಗೆ ಹುಡುಕಾಟ ನಡೆಸಿದ್ದಾರೆ !
ನೆನಕೆ : ಕಳೆದ ವರ್ಷ ಅಂಡಿಪಟ್ಟಿ ಉಪ ಚುನಾವಣೆಯಲ್ಲಿ ಜಯಲಲಿತಾ ಗೆದ್ದಾಗ, ನಾಗಪಟ್ಟಿನಂನ ರಾಜಾ ಎಂಬ ಜಯಾ ಭಕ್ತ ತನ್ನ ನಾಲಗೆಯನ್ನೇ ಕತ್ತರಿಸಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಿದ್ದ !
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...