‘ಬಯೋಟೆಕ್ ಉಪಕರಣಗಳ ಆಮದು ಸುಂಕ ತಗ್ಗಿಸಿ’ಬಜೆಟ್
ಆಗಸ್ಟ್ 31, ಶನಿವಾರ ಮುಂಜಾನೆ ‘ಕೋಬೊ ಹಾಲ್'ಗೆ ಬೇಗನೆ ಹೋದೆವು. ಅಲ್ಪೋಪಹಾರದ ತರುವಾಯ ಅಮೇರಿಕೆಯ ಎಲ್ಲ ಕನ್ನಡ ಸಂಘಗಳ ಮೆರವಣಿಗೆ ಇತ್ತು. ಕಳೆದ ಸಲ ಅದಕ್ಕೆ ‘ದಸರಾ ಮೆರವಣಿಗೆ' ಎಂದು ಕರೆದಿದ್ದರು; ಅಲ್ಲದೆ, ಜಂಬೂ-ಸವಾರಿಗಾಗಿ ಒಂದು ಪುಟ್ಟ ಆನೆಯ ಪ್ರತಿಕೃತಿಯನ್ನೇ ತಂದಿದ್ದರು.
ಈ ಸಲ ಆ ವೈಭವವಿರಲಿಲ್ಲ. ಅಮೇರಿಕೆಯಲ್ಲಿಯ ವಿವಿಧ ಕನ್ನಡ ಸಂಘಗಳ ಸದಸ್ಯರು ತಮ್ಮ ಬ್ಯಾನರ್ ಹಿಡಿದುಕೊಂಡು ದೇಶೀ ಉಡುಪುಗಳಲ್ಲಿ ಬಂದು ಮೆರವಣಿಗೆಯಲ್ಲಿ ಪಾಲುಗೊಂಡು ತಮ್ಮ ಉತ್ಸಾಹ ಪ್ರದರ್ಶಿಸಿದರು. ಅತಿಥಿಗಳೂ ಅದರಲ್ಲಿ ಭಾಗವಹಿಸಿದರು. ಮಹಿಳೆಯರ ಉತ್ಸಾಹ ಹೆಚ್ಚು ಎದ್ದು ಕಾಣುತ್ತಿತ್ತು. ಸಭಾಗೃಹದಲ್ಲಿ ಮೊದಲು ಅಮೇರಿಕೆಯ ರಾಷ್ಟ್ರಗೀತೆ ನುಡಿಸಲಾಯ್ತು. ನಂತರ ಭಾರತದ ರಾಷ್ಟ್ರಗೀತೆ.
ದೀಪ ಹಚ್ಚಿದ ಮೇಲೆ ‘ಹಚ್ಚೇವು ಕನ್ನಡದ ದೀಪ', ‘ನಿತ್ಯೋತ್ಸವ', ‘ಜೋಗದ ಸಿರಿ' ಹಾಡುಗಳ ಸಂಭ್ರಮ. ರೂಢಿಯಂತೆ ಸ್ವಾಗತ ಭಾಷಣಗಳಾದವು. ಅಕ್ಕ ಅಧ್ಯಕ್ಷರಾದ ಅಮರನಾಥ ಗೌಡ್, ಸಮ್ಮೇಳನದ ಸಂಚಾಲಕರಾದ ಕುದೂರು ಮುರಳಿ ಅವರ ಭಾಷಣಗಳಾದವು. ವಿಶೇಷ ಅತಿಥಿಯಾಗಿ ಆಗಮಿಸಿದ ಭಾರತದ ರಾಯಭಾರಿ ಲಲಿತ್ ಮಾನ್ಸಿಂಗ್ ಅವರು ಭಾಷಣ ಮಾಡಿದರು. ಅವರ ಪರಿಚಯವನ್ನು ರಮೇಶ ಗೌಡ್ ಅವರು ಮಾಡಿದರು.
ಲಲಿತ್ ಸಿಂಗ್ ಅವರು ಪ್ರಾರಂಭದಲ್ಲಿ ಕನ್ನಡದಲ್ಲಿ ‘ಎಲ್ಲರಿಗೂ ನಮಸ್ಕಾರ. ಎಲ್ಲರಿಗೂ ಅಭಿನಂದನೆ' ಎಂದಾಗ ಪ್ರೇಕ್ಷಕ ಸ್ತೋಮ ಕರತಾಡನದಿಂದ ಅವರನ್ನು ಸ್ವಾಗತಿಸಿತು. ಲಲಿತ್ ಮಾನ್ಸಿಂಗ್ ಅವರು ನಂತರ ಇಂಗ್ಲೀಷಿನಲ್ಲಿ ಚೆನ್ನಾಗಿ ಮಾತಾಡಿದರು. ಬಹುಸಂಖ್ಯೆಯಲ್ಲಿ ಬಂದಿದ್ದ ವಿಧಾನ ಸಭೆಯ ಸದಸ್ಯರನ್ನು, ಮಂತ್ರಿ ರಾಣಿ ಸತೀಶರನ್ನು, ಅಕ್ಕ ಅಧ್ಯಕ್ಷ ಅಮರನಾಥ ಗೌಡ್, ಅತಿಥಿ ಕವಿ ನಿಸಾರ್ ಅಹಮದರನ್ನು ಉದ್ದೇಶಿಸಿ, ನೆರೆದ ಕನ್ನಡ ಜನಸ್ತೋಮವನ್ನು ಅಭಿನಂದಿಸಿ ಮಾತನಾಡಿದರು. ‘ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರಗೆ ನೆರೆದ ಬಹು ದೊಡ್ಡ ಜನರ ಗುಂಪನ್ನು ಉದ್ದೇಶಿಸಿ ಮಾತಾಡಲು ನನಗೆ ಆನಂದ ಆಗುತ್ತಿದೆ.
ಭಾರತದ ಪ್ರತಿಯಾಂದು ರಾಜ್ಯವೂ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಪಡೆದಿದೆ. ಅಶೋಕನ ತರುವಾಯ ದಕ್ಷಿಣದಲ್ಲಿ ಶಾತವಾಹನರು ಮೆರೆದರು. ಕರ್ನಾಟಕ ಎಂದೊಡನೆ ಶ್ರವಣ ಬೆಳ್ಗೊಳದ ಗೊಮ್ಮಟೇಶ್ವರ, ಚಾಲುಕ್ಯರ ಬದಾಮಿ, ಪಟ್ಟದಕಲ್ಲು, ಐಹೊಳೆಯ ಶಿಲ್ಪದ ನೆನಪಾಗುತ್ತದೆ. ನಂತರ ಬಂದ ರಾಷ್ಟ್ರಕೂಟರ ಅಜಂತಾ-ಎಲ್ಲೋರಾ, ಕೈಲಾಸ ದೇವಾಲಯ ನೆನಪಾಗುತ್ತದೆ. ನಂತರ ನಾಲ್ಕು ನೂರು ವರುಷಗಳ ಅಸ್ಥಿರತೆಯ ನಂತರ ಬಂದ ವಿಜಯನಗರ ಸಾಮ್ರಾಜ್ಯವನ್ನು, ಕೃಷ್ಣದೇವರಾಯನನ್ನು ಯಾರೂ ಮರೆಯುವಂತಿಲ್ಲ.