ಮನೆಗೊಂದು ಗ್ರಂಥಾಲಯ - 500 - 1000 ರು.ಗೆ !
ಬೆಂಗಳೂರು : ವಚನ ಸಾಹಿತ್ಯ, ದಾಸ ಕೀರ್ತನೆ, ಕನ್ನಡ ಸಾಹಿತ್ಯ ಪರಂಪರೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಪರಿಚಯ, ಮಕ್ಕಳ ಸಾಹಿತ್ಯ- ಹೀಗೆ ಒಂದು ಮನೆ ಮಂದಿ ಓದಲೇಬೇಕಾದಂಥ ಪುಸ್ತಕಗಳ ಕಿಟ್ ಸಿದ್ಧವಿದೆ. ಸದ್ಯದಲ್ಲೇ ನಿಮ್ಮ ಮನೆಗೂ ಅದು ತಲುಪಿದರೂ ಅಚ್ಚರಿಯಿಲ್ಲ.
ಇದು ಸರ್ಕಾರದ ಸದಭಿರುಚಿಯ ಯೋಜನೆ. ಇದರ ಹೆಸರು ‘ಮನೆಗೊಂದು ಪುಟ್ಟ ಗ್ರಂಥಾಲಯ’. ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಈ ಯೋಜನೆಯ ರೂಪುರೇಷೆಯನ್ನು ಸೋಮವಾರ (ಫೆ.17) ಬಿಚ್ಚಿಟ್ಟರು. ಕನ್ನಡ ಪುಸ್ತಕ ಪ್ರಾಧಿಕಾರ ಹೊರ ತಂದಿರುವ ವಿಜ್ಞಾನಕ್ಕೆ ಸಂಬಂಧಿಸಿದ 7 ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತಾಡಿದರು.
ಪ್ರತಿಯಾಬ್ಬ ಕನ್ನಡಿಗನ ಮನೆಯಲ್ಲೂ ಮಹತ್ವದ ಸಾಹಿತ್ಯ ಕೃತಿಗಳು ಇರಬೇಕು ಅನ್ನುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. 1000 ರುಪಾಯಿ ಹಾಗೂ 500 ರುಪಾಯಿ ಬೆಲೆಯ ಎರಡು ಕಿಟ್ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
ಹೋಬಳಿಗಳಲ್ಲಿ ಮನೆ ಮನೆ ಕವಿಗೋಷ್ಠಿ : ರಾಜ್ಯದ ಎಲ್ಲಾ 800 ಹೋಬಳಿಗಳಲ್ಲಿ ‘ಮನೆ ಮನೆ ಕವಿಗೋಷ್ಠಿ’ ಕಾರ್ಯಕ್ರಮ ನಡೆಸಲು ಚಿಂತಿಸಲಾಗುತ್ತಿದೆ. ಇದಕ್ಕೆ ಬೇಕಾದ ಹಣ ಭರಿಸಲು ಸರ್ಕಾರ ಸಿದ್ಧವಿದೆ. ಗ್ರಾಮೀಣ ಪ್ರದೇಶದ ಸಾಹಿತ್ಯಾಸಕ್ತರಿಗೆ ಹಾಗೂ ಕವಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಸಲು ಯೋಚಿಸುತ್ತಿದ್ದೇವೆ ಎಂದು ರಾಣಿ ಸತೀಶ್ ಹೇಳಿದರು.
ಪ್ರಕಟಣೆ/ಬಿಡುಗಡೆಯ ಹಾದಿಯಲ್ಲಿ : ಸರ್ವಜ್ಞರ ಸಮಗ್ರ ವಚನ ಸಾಹಿತ್ಯ ಹಾಗೂ ಪು.ತಿ.ನರಸಿಂಹಾಚಾರ್ ಅವರ ಸಮಗ್ರ ಗದ್ಯ ಸಾಹಿತ್ಯ ಮಾರ್ಚ್ ತಿಂಗಳೊಳಗೆ ಓದುಗರ ಕೈ ಮುಟ್ಟಲಿವೆ. ಸರ್ವಜ್ಞ ವಚನ ಸಾಹಿತ್ಯದ ಬೆಲೆ ಕೇವಲ 50 ರುಪಾಯಿ. ಇದಲ್ಲದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತ ಮೂರ್ತಿ ಅವರ ಸಮಗ್ರ ಗದ್ಯ ಸಾಹಿತ್ಯ ಮತ್ತು ಚಂದ್ರಶೇಖರ ಕಂಬಾರರ ಸಮಗ್ರ ನಾಟಕ ಸಂಪುಟಗಳು ಪ್ರಕಟಣೆಗೆ ಸಿದ್ಧವಾಗುತ್ತಿವೆ. ಈ ಕೃತಿಗಳು ತಲಾ 400 ರುಪಾಯಿ ಬೆಲೆಗೆ ಲಭಿಸಲಿವೆ ಎಂದು ಸಚಿವೆ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...