ಹುಬ್ಬಳ್ಳಿ ನನ್ನ ಪ್ರೀತಿಯ ಊರು : ವಾಜಪೇಯಿ
ಹುಬ್ಬಳ್ಳಿ : ಹುಬ್ಬಳ್ಳಿ ಅಂದರೆ ನಂಗಿಷ್ಟ. ಸದಾಕಾಲ ಇಲ್ಲಿಗೆ ಬರಲು ನಾನು ಬಯಸುತ್ತೇನೆ ಎಂದು ಪ್ರಧಾನಿ ವಾಜಪೇಯಿ ಹೇಳಿದಾಗ, ಅವಳಿ ನಗರದ ಜನತೆಯ ಮೊಗದಲ್ಲಿ ಮಂದಹಾಸ.
ನೈಋತ್ಯ ವಲಯ ರೈಲ್ವೆ ಕಚೇರಿ ಕಟ್ಟಡಕ್ಕೆ ಶುಕ್ರವಾರ (ಫೆ.14) ಶಂಕು ಸ್ಥಾಪನೆ ಮಾಡಿದ ವಾಜಪೇಯಿ, ‘ಸಹೋದರ ಸಹೋದರಿಯರೇ, ನಿಮಗೆ ನನ್ನ ನಮಸ್ಕಾರಗಳು’ ಎಂದು ಉರು ಹೊಡೆದ ಕನ್ನಡದಲ್ಲಿ ಭಾಷಣ ಶುರುವಿಟ್ಟಾಗ ಕರತಾಡನ ಜೋರಾಯಿತು. ಕಳೆದ ಮೂರು ದಶಕಗಳಿಂದ ನಾನು ಹುಬ್ಬಳ್ಳಿಗೆ ಬರುತ್ತಿದ್ದೇನೆ ಎಂದು ಈ ಶಹರದ ಬಗ್ಗೆ ತಮ್ಮ ಒಲವನ್ನು ಹೇಳಿಕೊಂಡ ಪ್ರಧಾನಿ, ಪಾಕಿಸ್ತಾನದ ಮನೋಭಾವನೆಯನ್ನು ಕಟು ಮಾತುಗಳಿಂದ ಟೀಕಿಸಿದರು. ನೆರೆ ರಾಷ್ಟ್ರಗಳ ಜೊತೆ ನಾವು ಸಂತೋಷದಿಂದಿರಲು ಬಯಸಿದರೂ, ಅವರಿಗೆ ಅದು ಇಷ್ಟವಿಲ್ಲ. ಪಾಕಿಸ್ತಾನದ ಜೊತೆ ನಮಗೆ ಯಾವುದೇ ಘರ್ಷಣೆ ಇಷ್ಟವಿಲ್ಲ. ಆದರೆ ಕಾಶ್ಮೀರದ ವಿಷಯ ಎತ್ತಿಕೊಂಡು ವಿಶ್ವದ ಗಮನ ಸೆಳೆಯಲು ಆ ದೇಶ ಯತ್ನಿಸುತ್ತಿದೆ ಎಂದು ಟೀಕಿಸಿದರು.
ಅರ್ಧ ತಾಸು ಕಾಲ ಪ್ರಧಾನಿ ಮಾತಾಡಿದರು. ನಡುವೆ ಟೈಮಾಯಿತು ಎಂದು ಭದ್ರತಾ ದಳದವರು ಎಚ್ಚರಿಸಿದರೂ, ಪ್ರಧಾನಿ ನೆಚ್ಚಿನೂರಿನ ಜನತೆಯ ಮುಂದೆ ಮಾತನ್ನು ಮುಂದುವರೆಸಿದ್ದು ವಿಶೇಷ. ಸಮಾರಂಭದಲ್ಲಿ ಕೇಂದ್ರ ರೈಲ್ವೆ ಸಚಿವ ನಿತಿಶ್ ಕುಮಾರ್, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೇಂದ್ರದ ನಗರಾಭಿವೃದ್ಧಿ ಸಚಿವ ಅನಂತಕುಮಾರ್, ಕರ್ನಾಟಕದ ರಾಜ್ಯಪಾಲ ಟಿ.ಎನ್.ಚತುರ್ವೇದಿ, ಸಂಸದ ವಿಜಯ್ ಸಂಕೇಶ್ವರ್ ಮೊದಲಾದವರು ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...