ಕೆಪಿಸಿಸಿ ಕಡಿವಾಣ ಹಿಡಿದ ಜನಾರ್ದನ ಪೂಜಾರಿ
ಬೆಂಗಳೂರು : ಅಭಿಮಾನಿಗಳ ಜಯಘೋಷದ ನಡುವೆ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಬಿ.ಜನಾರ್ದನ ಪೂಜಾರಿ ಶನಿವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ನಾವೀಗ ಯುದ್ಧಭೂಮಿಯಲ್ಲಿದ್ದೇವೆ. ವಿಶ್ರಾಂತಿಯ ಮಾತೇ ಇಲ್ಲ ಎಂದು ಮುಂಬರುವ ವಿಧಾನಸಭಾ ಚುನಾವಣೆಗಳ ಕುರಿತು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪೂಜಾರಿ ಹೇಳಿದರು. ಶನಿವಾರ ನಡೆದ ಸಮಾರಂಭದಲ್ಲಿ ಪೂಜಾರಿ ಅವರು ನಿಕಟಪೂರ್ವ ಕೆಪಿಸಿಸಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.
ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರನ್ನು ತಮ್ಮ ನಾಯಕರೆಂದು ಬಣ್ಣಿಸಿದ ಪೂಜಾರಿ- ಕೃಷ್ಣ ಅವರ ಸರ್ಕಾರದ ಸಾಧನೆಗಳ ಕುರಿತು ತೃಪ್ತಿ ವ್ಯಕ್ತಪಡಿಸಿದರು. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಪೂಜಾರಿ- ಮುಂಬರುವ ಬಜೆಟ್ ರೈತರ ಪರವಾಗಿದ್ದು , ಈ ಬಜೆಟ್ ಇತರರಿಗೆ ಆದರ್ಶಪ್ರಾಯವಾಗಲಿದೆ ಎಂದು ಬಣ್ಣಿಸಿದರು.
ಪಕ್ಷದ ಬಲ ವೃದ್ಧಿ : ಜನಾರ್ದನ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ತನ್ನ ಬಲ ವರ್ಧಿಸಿಕೊಳ್ಳುವ ವಿಶ್ವಾಸವನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಹಾಗೂ ಪೂಜಾರಿ ಅವರ ಎದುರಾಳಿ ಎಂದು ಹೆಸರಾದ ವೀರಪ್ಪ ಮೊಯಿಲಿ ಅವರ ಗೈರು ಹಾಜರಿ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು .
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...