ಫೆ.16ರಂದು ದೆಹಲಿಯಲ್ಲಿ ತುಳು ರಾಷ್ಟ್ರೀಯ ಸಮಾವೇಶ
ಮಂಗಳೂರು : ಫೆಬ್ರವರಿ 16ನೇ ತಾರೀಕು ದೆಹಲಿಯಲ್ಲಿ ‘ದಿಲ್ಡಿ ತುಳು ಬೊಳ್ಪು’ (ದೆಹಲಿಯಲ್ಲಿ ತುಳು ದೀಪ) ಎಂಬ ರಾಷ್ಟ್ರೀಯ ಸಮಾವೇಶವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದೆ.
ನವ ದೆಹಲಿಯ ತುಳುನಾಡು ಅಭಿವೃದ್ಧಿ ವೇದಿಕೆಯ ಸಹಯೋಗದಲ್ಲಿ ನಡೆಯಲಿರುವ ಈ ಸಮಾವೇಶದ ಉದ್ದೇಶ- ಭಾರತೀಯ ಸಂವಿಧಾನದ 8ನೇ ಶೆಡ್ಯೂಲ್ನಲ್ಲಿ ತುಳುವನ್ನು ಸೇರಿಸಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು. ಅಕಾಡೆಮಿಯ ಅಧ್ಯಕ್ಷ ಡಾ.ವಾಮನ ನಂದಾವರ್ ಬುಧವಾರ (ಫೆ. 12) ಸುದ್ದಿಗಾರರಿಗೆ ಸಮಾವೇಶದ ವಿಷಯ ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ತುಳುವರನ್ನು ಸಮಾವೇಶದಲ್ಲಿ ಗೌರವಿಸಲಾಗುವುದು. ಈ ಗೌರವಕ್ಕೆ ಪಾತ್ರರಾಗಲಿರುವವರು- ಎಂ.ಕೆ.ಧರ್ಮರಾಜ (ಪತ್ರಿಕೋದ್ಯಮ), ಕೆ.ರಾಮ (ಸಮಾಜ ಸೇವೆ), ಕೆ.ಪಿ.ರಾವ್ (ತುಳು ಸಂಶೋಧನೆ), ಜಯರಾಂ ಬನಾನ್ (ಕೈಗಾರಿಕೆ), ಆರುವ ಕೊರಗಪ್ಪ ಶೆಟ್ಟಿ ಮತ್ತು ದಾಸಪ್ಪ ರೈ (ಯಕ್ಷಗಾನ), ಸದಾನಂದ ಸುವರ್ಣ (ನಾಟಕ).
ಸಮಾವೇಶದಲ್ಲಿ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸಲಿದ್ದು, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಉದ್ಘಾಟಿಸಲಿದ್ದಾರೆ ಎಂದು ನಂದಾವರ್ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...