ಗಂಡಸರ ಪ್ರೀತಿಗೆ ಸೋತು ಗಂಟು ತೋರದಿರಿ : ಮೋಟಮ್ಮ
ಬೆಂಗಳೂರು : ಗಂಡಂದಿರ ಹುಸಿ ಪ್ರೀತಿಗೆ ಮರುಳಾಗಿ ಗಂಟು ತೋರದಿರಿ. ನಾನು ಚುನಾವಣೇಲಿ ಸೋತಾಗ ಹಣ ಕೊಡಿ ಅಂತ ನನ್ನ ಗಂಡನನ್ನು ಕೇಳಿದಾಗ, ‘ನೀನೇನು ನಂಗೆ ಕೊಟ್ಟಿದ್ಯಾ ಅಂದರು’. ದುಡಿಯುವ ಹೆಂಗಸರ ಗಂಟಿನ ವಿಷಯ ಗುಟ್ಟಾಗೇ ಇರಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಕಿವಿ ಮಾತು ಹೇಳಿದರು.
ಗಂಡಂದಿರು ತಮ್ಮ ಲಾಭದ ಬಗ್ಗೆ ಹೆಂಡತಿಯರಿಗೆ ಹೇಳೋದೇ ಇಲ್ಲ. ಕೇಳೋಕೆ ಹೋದರೆ, ನಾಲ್ಕು ಏಟು ಕೊಡ್ತಾರೆ. ಹೀಗಿರುವಾಗ ದುಡಿಯುವ ಹೆಂಗಸರು ತಮ್ಮ ಲಾಭದ ವಿಷಯವನ್ನೇಕೆ ಬಹಿರಂಗ ಪಡಿಸಬೇಕೆಂದು ಪ್ರಶ್ನಿಸಿದರು.
ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಮತ್ತು ಕ್ಷಮಾ ಸಂಸ್ಥೆ ಆಯೋಜಿಸಿದ್ದ ಗೃಹಿಣಿಯರು ಸಿದ್ಧಪಡಿಸಿರುವ ವಸ್ತುಗಳ ಪ್ರದರ್ಶನ ಮೇಳ ‘ಗೃಹಲಕ್ಷ್ಮಿ’ಯನ್ನು ಬುಧವಾರ (ಫೆ.12) ಉದ್ಘಾಟಿಸಿ ಮೋಟಮ್ಮ ಮಾತಾಡಿದರು.
ರಾಜ್ಯದಲ್ಲಿ 85 ಸಾವಿರ ಸ್ತ್ರೀಶಕ್ತಿ ಗುಂಪುಗಳಿದ್ದು, ದೇಶದ ಗಮನ ಇತ್ತ ಹರಿದಿದೆ. ಈ ಗುಂಪುಗಳು 110 ಲಕ್ಷ ರುಪಾಯಿ ಹಣವನ್ನು ಉಳಿತಾಯ ಮಾಡಿವೆ. ಇದರಲ್ಲಿ 11 ಲಕ್ಷ ಹೆಂಗಸರ ಬೆವರಿದೆ ಎಂದು ವಿವರ ಕೊಟ್ಟರು.
ಹೆಣ್ಣು ಆಕಾಶಕ್ಕೂ ಹೋಗಿ ಬರಬಲ್ಲಳು ಎಂದು ನಿರೂಪಿಸಿದ ಕಲ್ಪನಾ ಚಾವ್ಲಾ, ಕಿರಣ್ ಬೇಡಿ ಹಾಗೂ ಇಂದಿರಾ ಗಾಂಧಿ ನಮಗೆ ಮಾದರಿಯಾಗಬೇಕು. ಹೆಂಗಸರು ಯಾರಿಗೂ ಕಡಿಮೆಯಿಲ್ಲ. ಗಂಡಸರಿಗೆ ನಾವು ಎಲ್ಲದರಲ್ಲೂ ಸರಿ ಸಮಾನರು. ನಮಗೆ ಪ್ರೋತ್ಸಾಹ ಕೊಟ್ಟು ಅವರು ಸಹಕರಿಸಬೇಕು. ನಾನು ಚುನಾವಣೆಯಲ್ಲಿ ಸೋತಾಗ ನನ್ನ ಗಂಡ ಕೂಡ ಹಣ ಕೊಡಲಿಲ್ಲ ಎಂದು ಖುಲ್ಲಂಖುಲ್ಲಾ ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ.ಎಂ.ಕೃಷ್ಣ ಪತ್ನಿ ಪ್ರೇಮಾ ಕೃಷ್ಣ ಕೂಡ ಹಾಜರಿದ್ದರು. ಕಾಸಿಯಾ ಬಗಲಲ್ಲಿರುವ ಆವರಣದಲ್ಲಿ ಗೃಹಲಕ್ಷ್ಮಿ ಮೇಳ ಫೆಬ್ರವರಿ 16ರವರೆಗೆ ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...