ಪ್ರೇಮಿಗಳ ದಿನದಂದು ಹುಬ್ಬಳ್ಳಿಗೆ ಪ್ರಧಾನಿ ವಾಜಪೇಯಿ
ಹುಬ್ಬಳ್ಳಿ : ಫೆಬ್ರವರಿ 14ರ ಪ್ರೇಮಿಗಳ ದಿನದಂದು ಹುಬ್ಬಳ್ಳಿಗೆ ಆಗಮಿಸುವ ಪ್ರಧಾನಿ ವಾಜಪೇಯಿ ಅವರು ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿಯ ಶಂಕುಸ್ಥಾಪನೆ ನೆರವೇರಿಸುವರು.
ಇದಕ್ಕೂ ಮುನ್ನ ಫೆ.13 ರಂದೇ ರಾಜ್ಯಕ್ಕೆ ಆಗಮಿಸುವ ಪ್ರಧಾನಿ ವಾಜಪೇಯಿ ಅವರು- ಬೆಂಗಳೂರಿನ ಕೆ.ಆರ್.ಪುರಂನಲ್ಲಿ 49 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೇಬಲ್ ಸೇತುವೆಯನ್ನು ಅನಾವರಣಗೊಳಿಸುವರು.
ಫೆ.14 ರಂದು ಕೋಲಾರಕ್ಕೆ ತೆರಳುವ ವಾಜಪೇಯಿ- 3866 ಕೋಟಿ ರುಪಾಯಿ ವೆಚ್ಚದ ವಿದ್ಯುತ್ ಸಾಗಾಣಿಕಾ ಘಟಕವನ್ನು ಉದ್ಘಾಟಿಸಿ, ಆನಂತರ ಹುಬ್ಬಳ್ಳಿಗೆ ತೆರಳುವರು.
ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗುವ ನೈಋತ್ಯ ರೈಲ್ವೆ ವಲಯದ ಶಂಕುಸ್ಥಾಪನೆ 1999 ರಲ್ಲಿಯೇ ನಡೆಯಬೇಕಾಗಿತ್ತು . ಆದರೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದುದರಿಂದ ಈ ಕಾರ್ಯಕ್ರಮ ಮುಂದಕ್ಕೆ ಹೋಗಿತ್ತು .
ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು - ಬಳ್ಳಾರಿಯ 137 ಕಿಮೀ ಉದ್ದದ ರೈಲ್ವೆ ಮಾರ್ಗ (ತೋರಣಗಲ್, ರಂಜಿತಪುರ್, ರಾಮದುರ್ಗ) ವನ್ನು ನೈಋತ್ಯ ರೈಲ್ವೆ ವಲಯಕ್ಕೆ ಸೇರಿಸಲು ನಿರ್ಧರಿಸಿದೆ. ಈ ಮುನ್ನ ಈ ಪ್ರದೇಶವನ್ನು ಗುಂತಕಲ್ ರೈಲ್ವೆ ವಲಯಕ್ಕೆ ಸೇರಿಸಲು ಸರ್ಕಾರ ನಿರ್ಧರಿಸಿತ್ತು . ಮ್ಯಾಂಗನೀಸ್ ವಲಯ ಎಂದೇ ಈ ವಲಯ ಹೆಸರಾಗಿದ್ದು ನೂರಾರು ಕೋಟಿ ರುಪಾಯಿ ವಹಿವಾಟು ಹೊಂದಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...