ಬೆಂಗಳೂರು, ಉಡುಪಿಯಲ್ಲಿ ಮಾಧ್ವ ಸಮ್ಮೇಳನ
ಉಡುಪಿ : ಅಖಿಲ ಭಾರತ ಮಾಧ್ವ ಮಹಾ ಮಂಡಲದ ಸುವರ್ಣೋತ್ಸವ ಹಾಗೂ 22ನೇ ಮಾಧ್ವ ತತ್ತ್ವಜ್ಞಾನ ಸಮ್ಮೇಳನ ಫೆ. 6ರಿಂದ 9ನೇ ತಾರೀಕಿನವರೆಗೆ ಬೆಂಗಳೂರಲ್ಲಿ ಹಾಗೂ ಫೆ. 10ರಿಂದ 12ನೇ ತಾರೀಕಿನವರೆಗೆ ಉಡುಪಿಯಲ್ಲಿ ನಡೆಯಲಿದೆ.
ಅಖಿಲ ಭಾರತ ಮಾಧ್ವ ಮಹಾ ಮಂಡಲ ಮತ್ತು ಪರ್ಯಾಯ ಫಲಿಮಾರು ಮಠ ಜಂಟಿಯಾಗಿ ಈ ಕಾರ್ಯಕ್ರಮಗಳನ್ನು ಆಯೋಜಿಸಿವೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭಾನುವಾರ (ಜ.26) ಸುದ್ದಿಗಾರರಿಗೆ ತಿಳಿಸಿದರು.
ಸಮ್ಮೇಳನದ ಕಾರ್ಯಕ್ರಮ ಪಟ್ಟಿ
ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾ ಪೀಠದಲ್ಲಿ ಫೆ.6ನೇ ತಾರೀಕು ಸಾಯಂಕಾಲ ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಲಿದ್ದು, ಮಾನವ ಹಕ್ಕು ಆಯೋಗದ ಅಧ್ಯಕ್ಷ ನ್ಯಾ. ಎಂ.ಎನ್.ವೆಂಕಟಾಚಲಯ್ಯ ಅಧ್ಯಕ್ಷತೆ ವಹಿಸುವರು.
ಫೆ. 8ನೇ ತಾರೀಕು ಶ್ರೀರಾಮನ ವ್ಯಕ್ತಿತ್ವ ವಿಶ್ಲೇಷಣೆ, ಹರಿನಾಮ ಸಂಕೀರ್ತನೆ, ಉಪನ್ಯಾಸ, ಯುವಗೋಷ್ಠಿ ಹಾಗೂ ಮಾಧ್ವ ಪೀಠಾಧೀಶರು ಹಾಗೂ ಯತಿಗಳ ಸಮಾವೇಶ ನಡೆಯಲಿದೆ.
ಫೆ. 9ನೇ ತಾರೀಕು ಮಾನವ ಸಂಪನ್ಮೂಲ ಖಾತೆ ಸಚಿವ ಮುರಳಿ ಮನೋಹರ ಜೋಷಿ ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಅದೇ ದಿನ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂತ್ರಾಲಯದ ರಾಘವೇಂದ್ರ ಮಠದ ಸುಶಮೀಂದ್ರ ತೀರ್ಥ ಸ್ವಾಮೀಜಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತಕುಮಾರ್ ಭಾಗವಹಿಸಲಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಫೆ.10ನೇ ತಾರೀಕು ಗೋಕರ್ಣ ಪರ್ತಗಾಳಿ ಮಠಾಧೀಶ ವಿದ್ಯಾಧಿ ರಾಜತೀರ್ಥ ಒಡೆಯರು ಸಮ್ಮೇಳನ ಉದ್ಘಾಟಿಸುವರು. ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಆ ದಿನ ಸಂಜೆ ಧಾರ್ಮಿಕ ಸಭೆ ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...