ಬೀದಿನಾಯಿ ಸಂತಾನಹರಣದಲ್ಲೂ ಲಂಚಕೋರತನ
ಬೆಂಗಳೂರು : ಬೊಗಳುವ ಬೀದಿ ನಾಯಿಗಳ ಸಂಖ್ಯೆ ಅತಿ ಹೆಚ್ಚಾಗಿರುವ ಸಿಲಿಕಾನ್ ನಗರಿಯಲ್ಲಿ, ಇವುಗಳನ್ನೇ ಲಂಚ ಹೊಡೆಯಲು ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳಿದ್ದಾರೆ. ಹಾಗಂತ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲ ಅವರಿಗೆ ಎಸ್ಡಿಬಿಐ ಸಂಸ್ಥೆ ದೂರು ಕೊಟ್ಟಿದೆ.
ಪೊಲೀಸ್ ಆಯುಕ್ತ ಎಂ.ಡಿ.ಸಿಂಗ್, ಸಂಚಾರಿ ವಿಭಾಗದ ಹೆಚ್ಚುವರಿಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿ ಕೆ.ಎಲ್.ಸುಧೀರ್ ಹಾಗೂ ಪ್ರಾಣಿ ಸಂರಕ್ಷಣೆ ಸಂಘದ ಪದಾಧಿಕಾರಿಗಳು ದೂರಿನ ಕುರಿತು ಲೋಕಯುಕ್ತರ ಕಚೇರಿಯಲ್ಲಿ ಸೋಮವಾರ (ಜ.27) ನಡೆದ ವಿಚಾರಣೆಯಲ್ಲಿ ಜಮಾಯಿಸಿದ್ದರು.
ಬೆಂಗಳೂರಲ್ಲಿ 3 ಲಕ್ಷ ಬೀದಿನಾಯಿಗಳಿವೆ. ಹಾದಿಹೋಕರನ್ನು ಕಚ್ಚುವ ನಾಯಿಗಳನ್ನು ಕೊಲ್ಲಬಹುದು ಎನ್ನುತ್ತದೆ ಕಾನೂನು. ಕೊಂದರೆ ನಾವು ಸುಮ್ಮನಿರುವುದಿಲ್ಲ ಎನ್ನುತ್ತಾರೆ ಪ್ರಾಣಿ ದಯಾ ಸಂಘದವರು. ಅದಕ್ಕೇ ನಾಯಿಗಳ ಸಂತಾನ ಹರಣದ ಕೆಲಸಕ್ಕೆ ಪಾಲಿಕೆ ನಿರ್ಧರಿಸಿತು. ಖುದ್ದು ಪಾಲಿಕೆಯ ಸಿಬ್ಬಂದಿ ಈ ಕೆಲಸ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಖಾಸಗಿ ಸಂಸ್ಥೆಗಳಿಗೆ ಈ ಕೆಲಸ ವಹಿಸಲಾಗುತ್ತಿದೆ. ಇದಕ್ಕೆ ಪಾಲಿಕೆ 1.5 ಕೋಟಿ ರುಪಾಯಿ ಖರ್ಚು ಮಾಡಿದೆ. ಹೀಗೆ ಮಾಡುವ ಖರ್ಚಿನಲ್ಲಿ ಅವ್ಯವಹಾರ ನಡೆಯುತ್ತಿದೆ ಅನ್ನುವುದು ಎಸ್ಡಿಬಿಐ ದೂರು.
‘ಕಳ್ಳರ ಹಿಡಿಯೋಕೆ ಆಗ್ತಿಲ್ಲ, ನಾಯಿಗಳನ್ನ ಹೇಗೆ ಹಿಡಿಯೋಣ ಹೇಳಿ’ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುವ ಸಂಸ್ಥೆಗಳಿಗೆ ನಾಯಿಗಳನ್ನು ಹಿಡಿದು ಕೊಡುವ ಕೆಲಸವನ್ನು ಪೊಲೀಸರಿಗೂ ವಹಿಸಲಾಗಿದೆ. ವಿಚಾರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು- ‘ಬೆಂಗಳೂರಲ್ಲಿ ಕಳ್ಳಕಾಕರು ಜಾಸ್ತಿಯಾಗಿದ್ದಾರೆ. ಅವರನ್ನು ಹಿಡಿಯುವುದೇ ಕಷ್ಟದ ಕೆಲಸವಾಗಿದೆ. ಇದರ ನಡುವೆ ನಾಯಿಗಳನ್ನು ಹಿಡಿಯುವ ಕೆಲಸ ನಿಭಾಯಿಸುವುದು ಪೊಲೀಸರಿಗೆ ಸಾಧ್ಯವಿಲ್ಲ. ಇದಕ್ಕೆ ದಾರಿ ತೋರಬೇಕು’ ಎಂದು ಅಲವತ್ತುಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...