ನಾಗಪ್ಪನವರ ಅಪಹರಣ ಸಂಬಂಧ ಇನ್ನಿಬ್ಬರ ಬಂಧನ
ಬೆಂಗಳೂರು : ಸಂಯುಕ್ತ ಜನತಾದಳದ ನಾಯಕ ಎಚ್.ನಾಗಪ್ಪ ಅವರ ಅಪಹರಣ ಸಂಬಂಧ ಕರ್ನಾಟಕ ವಿಶೇಷ ಪಡೆಯು ಮತ್ತಿಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ಜ.22ರ ಬುಧವಾರ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಬಸವ ಹಾಗೂ ನಂಜೇಗೌಡ ಎನ್ನುವವರನ್ನು ಕೆಂಚೇನಹಳ್ಳಿ ಸಮೀಪದ ಅರಣ್ಯದಲ್ಲಿ ಮಂಗಳವಾರ ಬಂಧಿಸಲಾಯಿತು. ನಾಗಪ್ಪನವರ ಅಪಹರಣ ಸಂದರ್ಭದಲ್ಲಿ ಬಸವ ಹಾಗೂ ನಂಜೇಗೌಡ ನಾಗಪ್ಪನವರ ಮನೆಯ ಮುಂಭಾಗದಲ್ಲಿ ಕಾವಲಿದ್ದರು. ಅಪಹರಣದ ವೇಳೆಯಲ್ಲಿ ಪೊಲೀಸರೇನಾದರೂ ಚಟುವಟಿಕೆ ಕೈಗೊಂಡಿದ್ದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ಬಸವ ಹಾಗೂ ನಂಜೇಗೌಡ ಸಜ್ಜಾಗಿದ್ದರು.
ವೀರಪ್ಪನ್ ನಿರ್ದೇಶನದ ಮೇರೆಗೆ ನಾಗಪ್ಪನವರ ನಿವಾಸದೆದುರು ಕಾವಲಿದ್ದ ಬಸವ ಹಾಗೂ ನಂಜೇಗೌಡ, ತಮ್ಮ ಕೆಲಸಕ್ಕೆ ತಲಾ 5000 ರುಪಾಯಿ ಪಡೆದಿದ್ದಾರೆ.
ವೀರಪ್ಪನ್ ಹಿಟ್ಲಿಸ್ಟ್ನಲ್ಲಿರುವ ಆಹಾರ ಸಂಸ್ಕರಣ ಸಚಿವ ರಾಜೂಗೌಡ ಅವರ ನಿವಾಸದೆದುರು ಕೂಡ ಬಂಧಿತರಿಬ್ಬರು ಕಾಣಿಸಿಕೊಂಡಿದ್ದರು. ಲೋಕನಹಳ್ಳಿ ಕಾಡಿನ ಬಳಿ ಬಿಡಾರ ಹೂಡಿದ್ದ ವೀರಪ್ಪನ್ಗೆ ಹಾಗೂ ಬಂಧಿತರು ಆಹಾರ ಸರಬರಾಜು ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ