‘ಗಂಗೂಲಿ ಕೈಗೆ ವಿಶ್ವಕಪ್, ಪೊಲೀಸ್ ಕೈಗೆ ವೀರಪ್ಪನ್!’
ಬೆಂಗಳೂರು : ವಿಶ್ವ ಕಪ್ನಲ್ಲಿ ಕ್ರಿಕೆಟ್ನಲ್ಲಿ ಭಾರತ ಗೆಲ್ಲುತ್ತದೆ ಹಾಗೂ ನರಹಂತಕ ವೀರಪ್ಪನ್ನನ್ನು ಹಿಡಿಯುವ ದಿನ ದೂರವಿಲ್ಲ ಎಂದು ಹೆಸರಾಂತ ಭವಿಷ್ಯಕಾರ ಡಾ.ಎಸ್.ಕೆ.ಜೈನ್ ಭವಿಷ್ಯ ನುಡಿದಿದ್ದಾರೆ.
ಇತ್ತೀಚೆಗೆ ನಡೆದ ‘ವುಮೆನ್ಸ್ ವರ್ಲ್ಡ್ ಎಕ್ಸಿಬಿಷನ್’ನ ಸಮಾರೋಪ ಸಮಾರಂಭದಲ್ಲಿ ಜೈನ್ ಈ ಒಳ್ಳೆ ಭವಿಷ್ಯ ಹೇಳಿದರು. ಗ್ರಹಗತಿಗಳ ಅಧ್ಯಯನದ ಸಹಿತ ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ನಲ್ಲಿ ಸೌರವ್ ಗಂಗೂಲಿಗೆ ಕಪ್ ಎತ್ತಿಕೊಳ್ಳುವ ಉಜ್ವಲ ಅವಕಾಶವಿದೆ ಎಂದು ಜೈನ್ ಆತ್ಮವಿಶ್ವಾಸದಿಂದ ಹೇಳಿದರು.
ವೀರಪ್ಪನ್ ಯಾವತ್ತು ಸಿಗುತ್ತಾನೆ ಅಂತ ಕರಾರುವಾಕ್ಕಾಗಿ ಹೇಳುವಿರಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ಅದು ಸಾಧ್ಯವಿಲ್ಲ. ವೀರಪ್ಪನ್ ಜನ್ಮ ದಿನಾಂಕ ಗೊತ್ತಾಗಬೇಕು. ಅದನ್ನು ಸಂಪಾದಿಸಲು ಯತ್ನಿಸುತ್ತಿದ್ದೇನೆ. ಅದು ಸಿಕ್ಕರೆ ಅವನು ಯಾವತ್ತು ಸಿಗುತ್ತಾನೆ ಅಂತ ಹೇಳಬಲ್ಲೆ ಎಂದು ಉತ್ತರಿಸಿದರು.
ಶನಿ ಹಾಗೂ ಚಂದ್ರ ಗ್ರಹಗಳ ಗತಿ ಬರುವ ಮೇ ತಿಂಗಳಲ್ಲಿ ಆತಂಕದ ದಿನಗಳ ಸೂಚನೆ ಕೊಟ್ಟಿದೆ. ಇರಾಕ್ ವಿರುದ್ಧ ಅಮೆರಿಕ ಯುದ್ಧ ಘೋಷಿಸುವುದಿಲ್ಲ ಎಂದು ನಂಬಿದ್ದೇನೆ. ಭಾರತ- ಪಾಕಿಸ್ತಾನ ನಡುವಿನ ಹಳಸಿದ ಸಂಬಂಧ ಇನ್ನಷ್ಟು ಆತಂಕಗಳನ್ನು ಒಡ್ಡಲಿದೆ ಎಂದು ಜೈನ್ ಎಚ್ಚರಿಸಿದರು.
ತಾರಾಬಲವೇ ಮಾನವನ ನಿಯಂತ್ರಕ. ಭಗವಂತನ ಸ್ಮರಣೆಯಿಂದ ಪವಾಡ ಸಾಧ್ಯವಿದೆ. ದೇವರ ಧ್ಯಾನ ಮಾಡುವುದರಿಂದ ಅದೃಷ್ಟವನ್ನು ಒಲಿಸಿಕೊಳ್ಳುವುದು, ಶಾಂತ ಚಿತ್ತರಾಗುವುದು, ಒಳ್ಳೆಯ ಭವಿಷ್ಯ ಕಂಡುಕೊಳ್ಳುವುದು ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲರೂ ಹರೇರಾಮ ಹರೇಕೃಷ್ಣ ಜಪ ಮಾಡಿ ಎಂದು ಕರೆ ಕೊಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...