ಬೀದರ್ ರೈತರಿಂದ ಮೀಟರ್ಗಳ ಶವಯಾತ್ರೆ
ಬೀದರ್: ನೀರಾವರಿ ಪಂಪ್ ಸೆಟ್ಗೆ ಅಳವಡಿಸಿದ್ದ ಮೀಟರ್ ಅನ್ನು ಕಿತ್ತು ಬೀದರ್ ನಗರದಲ್ಲಿ ರೈತರು ನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಭಾರೀ ಸಂಖ್ಯೆಯಲ್ಲಿ ಕೆಪಿಟಿಸಿಎಲ್ ಕಚೇರಿಗೆ ಮುತ್ತಿಗೆ ಹಾಕಿದ ರೈತರು ನಾನಾ ಸಂಘಟನೆಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿದರು. ರೈತರ ಜಂಟಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯಲ್ಲಿ ಮಹಿಳೆಯರೂ ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಸುಮಾರು 20ಕ್ಕೂ ಹೆಚ್ಚು ಎತ್ತಿನ ಬಂಡಿಗಳಲ್ಲಿ 700 ವಿದ್ಯುತ್ ಮೀಟರ್ಗಳನ್ನು ತುಂಬಲಾಗಿತ್ತು. ಆ ಮೀಟರ್ಗಳಿಗೆ ಬಿಳಿ ಬಟ್ಟೆ ಹೊದೆಸಿ, ಕುಂಕುಮ ಹೂವು ಹಾಕಿ, ಶವ ಯಾತ್ರೆಯ ಮಾದರಿಯಲ್ಲಿ ಬಾಜಾ ಭಜಂತ್ರಿ ಮೆರವಣಿಗೆಯಲ್ಲಿ ಕೆಪಿಟಿಸಿಎಲ್ ಕಚೇರಿಗೆ ತರಲಾಯಿತು.
ಕೆಪಿಟಿಸಿಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು. ರೈತರು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಪಾಟೀಲರ ವಿರುದ್ಧ ಘೋಷಣೆ ಕೂಗಿದರು. ಮಳೆ ಅಭಾವ ಹಾಗೂ ಬರದಿಂದ ತತ್ತರಿಸಿರುವ ಜಿಲ್ಲೆಯ ರೈತರು ದಿನ ಕಳೆಯುವುದೇ ಕಷ್ಟವಾಗಿರುವಾಗ ಮೀಟರ್ ಅಳವಡಿಸಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿರುವ ಸರಕಾರದ ಕ್ರಮವನ್ನು ರೈತರು ಖಂಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...