ಮೈಸೂರಲ್ಲಿ ಮತಾಂತರ ಗಲಾಟೆ,19 ಮಂದಿ ಬಂಧನ
ಮೈಸೂರು : ನಗರದ ಹೋಟೆಲ್ನಲ್ಲಿ ನಡೆಯುತ್ತಿತ್ತು ಎನ್ನಲಾದ ಮತಾಂತರ ಧಾರ್ಮಿಕ ಸಭೆಯನ್ನು ಭಂಗಗೊಳಿಸಲು ಪ್ರಯತ್ನಿಸಿದ ಆರೋಪದ ಮೇಲೆ 19 ಜನರನ್ನು ಬಂಧಿಸಲಾಗಿದೆ.
ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಜ.19ರ ಭಾನುವಾರದಂದು ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರು ದೇವರಾಜ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವಿಕೋಪಕ್ಕೆ ತಿರುಗಿದಾಗ ಪೊಲೀಸರು, ಬಿಜೆಪಿ ಶಾಸಕ ಎ. ರಾಮ್ದಾಸ್ ಸೇರಿದಂತೆ ಹಲವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಇಂದಿರಾ ಭವನ್ ಹೋಟೆಲ್ನಲ್ಲಿ ಕ್ರೆೃಸ್ತ ಮತದ ಧರ್ಮ ಗುರು ವಿನ್ಸಂಟ್ ಕುಮಾರ್ ಅವರು ಪ್ರಾರ್ಥನಾ ಸಭೆ ನಡೆಸುತ್ತಿದ್ದರು. ಆರ್ಥಿಕವಾಗಿ ಹಿಂದುಳಿದ 17 ಮಂದಿ ಹಿಂದೂ ಹೆಣ್ಣು ಮಕ್ಕಳು ಸೇರಿದಂತೆ 25ಕ್ಕೂ ಹೆಚ್ಚು ಜನ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿಗೆ ಆಗಮಿಸಿದ ಭಜರಂಗ ದಳದ ಕಾರ್ಯಕರ್ತರು ಪ್ರಾರ್ಥನಾ ಸಭೆಯ ನೆಪದಲ್ಲಿ ಮತಾಂತರ ಮಾಡುತ್ತಿರುವುದಾಗಿ ಆರೋಪಿಸಿ ದಾಂಧಲೆ ಎಬ್ಬಿಸಿದರು.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ದೇವರಾಜ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...