ಮತಾಂತರ ಭಾರತದ ಸಂಪ್ರದಾಯವಲ್ಲ -ಅಡ್ವಾಣಿ
ಬೆಂಗಳೂರು : ಮತಾಂತರದ ಬಗೆಗೆ ಅತೃಪ್ತಿ ವ್ಯಕ್ತಪಡಿಸಿರುವ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ‘ಮತಾಂತರ ಭಾರತದಲ್ಲಿ ಯಾವತ್ತೂ ಸಂಪ್ರದಾಯವಾಗಿ ಪರಿಣಮಿಸಿಲ್ಲ ’ ಎಂದು ಅಭಿಪ್ರಾಯಪಟ್ಟರು.
ಅಡ್ವಾಣಿ ಅವರು ಆರ್ಟ್ ಅಫ್ ಲಿವಿಂಗ್ನ ರವಿಶಂಕರ್ ಬೆಂಗಳೂರಿನಲ್ಲಿ ಏರ್ಪಡಿಸಿರುವ ‘ಜಾಗತಿಕ ಆಧ್ಯಾತ್ಮಿಕ ಪುನರುತ್ಥಾನ ಹಾಗೂ ಮಾನವೀಯ ಮೌಲ್ಯಗಳು’ ಮೇಳದಲ್ಲಿ - ಜ.18 ರ ಶನಿವಾರ ಭಾಗವಹಿಸಿ ಮಾತನಾಡುತ್ತಿದ್ದರು.
ರಾಷ್ಟ್ರದ ಆಧ್ಯಾತ್ಮಿಕ ತತ್ವಜ್ಞಾನ ಯಾವತ್ತೂ ಸಂಕುಚಿತವಾಗಿಲ್ಲ . ಯಾವುದೇ ಸಂಪ್ರದಾಯದಲ್ಲಿ ಒಳ್ಳೆಯದನ್ನು ಒಪ್ಪಿಕೊಳ್ಳುವುದರಲ್ಲಿ ಹಾಗೂ ಸ್ವೀಕರಿಸುವುದರಲ್ಲಿ ನಮ್ಮ ತತ್ವಶಾಸ್ತ್ರ ಹಿಂದುಮುಂದು ನೋಡಿಲ್ಲ ಎಂದು ಅಡ್ವಾಣಿ ಹೇಳಿದರು.
ಮತಾಂತರಗೊಳ್ಳುವುದು ಭಾರತದಲ್ಲಿ ಸಂಪ್ರದಾಯವಾಗಿ ಬೆಳೆದಿಲ್ಲ . ಅದರಲ್ಲೂ ಪ್ರಶ್ನಾರ್ಹ ಕಾರಣಗಳಿಗಾಗಿ ಮತಾಂತರಗೊಳ್ಳುವ ಉದಾಹರಣೆಗಳು ಅತ್ಯಲ್ಪ ಎಂದು ಉಪ ರಾಷ್ಟ್ರಪತಿ ಭೈರಾನ್ಸಿಂಗ್ ಶೆಖಾವತ್ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಭಾಗವಹಿಸಿದ್ದ ಮೇಳದಲ್ಲಿ ಉಪ ಪ್ರಧಾನಿ ನುಡಿದರು.
ಆಧ್ಯಾತ್ಮಿಕ ಜೀವನ ಹಾಗೂ ತಾತ್ವಿಕ ತಳಹದಿಯ ಮೂಲಕ ಭಾರತ ವಿಶ್ವವನ್ನು ಮುಖಾಮುಖಿಯಾಗಲು ಬಯಸುವುದೇ ವಿನಃ ತನ್ನ ಶಸ್ತ್ರ ಸಾಮರ್ಥ್ಯದ ಭುಜಬಲದ ಮೂಲಕವಲ್ಲ . ಭಾರತ ತನ್ನ ಆಧ್ಯಾತ್ಮಿಕ ಪ್ರಭೆಯ ಕಾರಣದಿಂದಲೇ ಜಾಗತಿಕ ವೇದಿಕೆಯ ಗಮನ ಸೆಳೆದಿದೆ.
ಜೀವನದಲ್ಲಿ ಹಾಸುಹೊಕ್ಕಾಗಿರುವ ಮಾನವೀಯ ಮೌಲ್ಯಗಳನ್ನು ಶಿಕ್ಷಣದಲ್ಲಿ ಅಳವಡಿಸಲು ಸರ್ಕಾರ ಪ್ರಯತ್ನಿಸಿದರೂ, ಈ ಪ್ರಯತ್ನಗಳನ್ನು ದುರಾದೃಷ್ಟವಶಾತ್ ರಾಜಕೀಯಗೊಳಿಸಲಾಗಿದೆ ಎಂದು ಅಡ್ವಾಣಿ ವಿಷಾದಿಸಿದರು.
ನಮ್ಮ ರಾಷ್ಟ್ರದ ತಾತ್ವಿಕ ತಳಹದಿ ಹಾಗೂ ಸ್ವಾತಂತ್ರ್ಯ ಚಳವಳಿಯ ಬೀಜಗಳು ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ, ರಾಮಕೃಷ್ಣ ಪರಮಹಂಸ ಮುಂತಾದ ನಾಯಕರಿಂದ ಬಿತ್ತಲಾಗಿರುವುದನ್ನು ಮರೆಯಬಾರದು ಎಂದು ಉಪ ಪ್ರಧಾನಿ ಹೇಳಿದರು.
ಕರ್ನಾಟಕದ ರಾಜ್ಯಪಾಲ ಟಿ.ಎನ್.ಚತುರ್ವೇದಿ, ಕೇಂದ್ರ ಗೃಹಖಾತೆ ರಾಜ್ಯ ಸಚಿವ ಐ.ಡಿ.ಸ್ವಾಮಿ, ಕೇಂದ್ರ ಸಚಿವ ವಿನೋದ್ ಖನ್ನಾ , ಸಂಯುಕ್ತ ಜನತಾದಳದ ನಾಯಕ ವಿಜಯ ಮಲ್ಯ, ಬೋಟ್ಸ್ವಾನ ಹಾಗೂ ಪೋಲೆಂಡ್ಗಳ ಪ್ರಥ ಮಹಿಳೆಯರು, ತಷ್ಕನಿ ಅಧ್ಯಕ್ಷ ಎನ್ರಿಕೊ ಸೆಚ್ಚೆಟ್ಟಿ ಮುಂತಾದ ಗಣ್ಯರು ಮೇಳದಲ್ಲಿ ಹಾಜರಿದ್ದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...