ಹಿಂದೂಸ್ತಾನಿ ಭೀಮ್ಸೇನ್ ಜೋಷಿಗೆ ಸ್ವಾತಿ ಪುರಸ್ಕಾರಂ
ತಿರುವನಂತಪುರಂ : ಪುರಂದರ ದಾಸರ ‘ಭಾಗ್ಯದಾ ಲಕ್ಷ್ಮಿ ಬಾರಮ್ಮ’ ಕೀರ್ತನೆಯನ್ನು ತಮ್ಮ ವಿಶಿಷ್ಟ ಶೈಲಿಯ ಹಾಡುಗಾರಿಕೆಯ ಮೂಲಕ ಜನಪ್ರಿಯಗೊಳಿಸಿದ ದೇಶದ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರ ಭೀಮ್ಸೇನ್ ಜೋಷಿ ಅವರು ಕೇರಳ ಸರ್ಕಾರದ ಅತ್ಯುಚ್ಛ ಸಂಗೀತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜನಪ್ರಿಯ ಲೇಖಕ ಪ್ರೊ. ಎಸ್.ಗುಪ್ತನ್ ನಾಯರ್ ನೇತೃತ್ವದ ಆಯ್ಕೆ ಸಮಿತಿಯು ಭೀಮ್ಸೇನ್ ಜೋಷಿ ಅವರನ್ನು ಪ್ರತಿಷ್ಠಿತ ‘ಸ್ವಾತಿ ಪುರಸ್ಕಾರಂ’ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಸಂಸ್ಕೃತಿ ಖಾತೆ ಸಚಿವ ಜಿ.ಕಾರ್ತಿಕೇಯನ್ ಗುರುವಾರ (ಜ.16) ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಒಂದು ಲಕ್ಷ ರುಪಾಯಿ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಸ್ವಾತಿ ಪುರಸ್ಕಾರಂ ಒಳಗೊಂಡಿದೆ. ಭಾರತೀಯ ಸಂಗೀತ ಕ್ಷೇತ್ರದಲ್ಲಿ ಭೀಮ್ಸೇನ್ ಜೋಷಿ ಅವರು ಅಪರೂಪದ ಪ್ರತಿಭೆಯಾಗಿದ್ದು , ಹಿಂದೂಸ್ತಾನಿ ಕ್ಷೇತ್ರದ ಧ್ರುವತಾರೆ ಎಂದು ಕಾರ್ತಿಕೇಯನ್ ಬಣ್ಣಿಸಿದರು.
ಸೆಮ್ಮಂಕುಡಿ ಶ್ರೀನಿವಾಸ ಅಯ್ಯರ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಡಿ.ಕೆ.ಪಟ್ಟಮ್ಮಾಳ್, ಪಾಲಕ್ಕಾಡ್ ಕೆ.ವಿ.ನಾರಾಯಣ ಸ್ವಾಮಿ ಹಾಗೂ ಟಿ.ಎನ್.ಕೃಷ್ಣನ್ ಈ ಮುನ್ನ ಸ್ವಾತಿ ಪುರಸ್ಕಾರಂ ಮನ್ನಣೆಗೆ ಪಾತ್ರರಾಗಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...