2003ರಲ್ಲಿ 11,000 ಮನೆಗಳ ನಿರ್ಮಾಣಕ್ಕೆ ಕೇಂದ್ರದ ಸಮ್ಮತಿ
ಬೆಂಗಳೂರು : ವಾಲ್ಮೀಕಿ ಅಂಬೇಡ್ಕರ್ ವಸತಿ ಯೋಜನೆಯನ್ನು ಕರ್ನಾಟಕ ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿರುವುದಕ್ಕೆ ಇದು ಬೋನಸ್ಸು- ಕೇಂದ್ರ ಸರ್ಕಾರ ಈ ವರ್ಷ ರಾಜ್ಯದಲ್ಲಿ 11 ಸಾವಿರ ಹೆಚ್ಚುವರಿ ಮನೆಗಳನ್ನು ಕಟ್ಟಿಕೊಡಲು ಅನುಮತಿ ಕೊಟ್ಟಿದೆ.
ರಾಜ್ಯ ವಸತಿ ಸಚಿವ ಸಗೀರ್ ಅಹಮದ್ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈಗಾಗಲೇ ಯೋಜನೆಯಡಿ ಮಂಜೂರಾಗಿದ್ದಂತೆ 13 ಸಾವಿರ ಮನೆಗಳನ್ನು ಕಟ್ಟಿದ್ದೇವೆ. ಈ ಯೋಜನೆಯಡಿ ಕಟ್ಟುವ ಮನೆಗಳಿಗಲ್ಲದೆ, ಉತ್ತರ ಕರ್ನಾಟಕದಲ್ಲಿ ನಿರಾಶ್ರಿತರಿಗೆ ಸೂರೊದಗಿಸಲು 25 ಸಾವಿರ ಮನೆಗಳ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ಹಣ ಮಂಜೂರು ಮಾಡಿದೆ. ಈ ಪೈಕಿ ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಿದ್ದರಿಂದ ನಿರಾಶ್ರಿತರಾದ 1000 ಕುಟುಂಬಗಳಿಗೆ ಮನೆ ಕಟ್ಟಿಕೊಡಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರ ಈವರೆಗೆ ನಿರಾಶ್ರಿತರಿಗೆ 5 ಲಕ್ಷ ಮನೆಗಳನ್ನು ಕಟ್ಟಿಕೊಟ್ಟಿದೆ. ಒಟ್ಟು 11 ಲಕ್ಷ ಮನೆಗಳ ಕಟ್ಟುವುದು ಗುರಿ. ಬರುವ ಮಾರ್ಚ್ನೊಳಗೆ 50 ಸಾವಿರ ಮನೆಗಳ ಕಟ್ಟುವ ಉದ್ದೇಶವಿದೆ. ಅಂದುಕೊಂಡಿರುವ 15 ಲಕ್ಷ ನಿವೇಶನಗಳ ಪೈಕಿ ಈಗಾಗಲೇ 7 ಲಕ್ಷ ನಿವೇಶನಗಳನ್ನು ಸರ್ಕಾರ ಹಂಚಿದೆ ಎಂದು ಸಗೀರ್ ಹೇಳಿದರು.
ಷರೀಫ್ಗೆ ಬೇಜಾರಾಗಿರೋದು ನಿಜ : ಹಿಂದುತ್ವವನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುವಲ್ಲಿ ಕಾಂಗ್ರೆಸ್ ಪಕ್ಷದ ಕೈಲಿ ಆಗುತ್ತಿಲ್ಲ ಎಂಬ ಕಾರಣಕ್ಕೆ ಕೇಂದ್ರದ ಮಾಜಿ ರೈಲ್ವೆ ಸಚಿವ ಜಾಫರ್ ಷರೀಫ್ ಅಸಮಾಧಾನಗೊಂಡಿದ್ದಾರೆ ಎಂದು ಸಗೀರ್ ಹೇಳಿದರು. ಪಕ್ಷದ ಚಟುವಟಿಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿರುವುದೂ ನಿಜ ಎಂದರು. ಆದರೆ ಪತ್ರದ ತಿರುಳನ್ನು ಬಹಿರಂಗ ಪಡಿಸಲು ನಿರಾಕರಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...