ತಲೆಯೆತ್ತಲಿದೆ ಕೇರಳದಲ್ಲಿ ಇನ್ಫೋಸಿಸ್ ಅಂಗಡಿ
ಬೆಂಗಳೂರು : ಸೂಕ್ತ ಪ್ರದೇಶದಲ್ಲಿ 25 ಎಕರೆ ಜಾಗೆ ಕೊಡಿಸಿ. ನಾವು ಬಂದು ಸಾಫ್ಟ್ವೇರ್ ಅಭಿವೃದ್ಧಿ ಕೇಂದ್ರ ತೆರೆಯುತ್ತೇವೆ ಎಂದು ಇನ್ಫೋಸಿಸ್ನ ರಾಜಗುರು ಎನ್.ಆರ್.ನಾರಾಯಣ ಮೂರ್ತಿ ಕೇರಳ ಮುಖ್ಯಮಂತ್ರಿ ಆ್ಯಂಥೋನಿಗೆ ಹೇಳಿದ್ದಾರೆ.
ಮಂಗಳವಾರ (ಜ.7) ಖುದ್ದು ಆ್ಯಂಟನಿ ಇನ್ಫೋಸಿಸ್ಗೆ ಬಂದು ನಾರಾಯಣ ಮೂರ್ತಿ ಮುಂದೆ ತಮ್ಮೂರಿನಲ್ಲಿ ಅಂಗಡಿ ತೆರೆಯುವ ಪ್ರಸ್ತಾವನೆ ಇಟ್ಟ ಕಾರಣ ಈ ನಿರ್ಧಾರ ತೆಗೆದುಕೊಂಡೆವು ಎಂದು ಇನ್ಫೋಸಿಸ್ನ ಮುಖ್ಯ ಆಪರೇಟಿಂಗ್ ಅಧಿಕಾರಿ ಎಸ್.ಗೋಪಾಲಕೃಷ್ಣನ್ ಮಾಧ್ಯಮಗಳಿಗೆ ತಿಳಿಸಿದರು.
ಆ್ಯಂಟನಿ ಕೂಡ ತಮ್ಮ ಬೆಂಗಳೂರು ಭೇಟಿಯನ್ನು ಖಚಿತಪಡಿಸಿದ್ದು, ಇನ್ಫೋಸಿಸ್ ನಿರ್ಣಯದಿಂದ ತಾವು ಆನಂದ ತುಂದಿಲರಾಗಿರುವುದಾಗಿ ಹೇಳಿದರು. ಆ್ಯಂಟನಿಗೆ ಈ ಪಾಟಿ ಸಂತೋಷವಾಗಲು ಕಾರಣವಿದೆ.
ಕೇರಳದಲ್ಲಿ ಐಟಿ ಜೋರಾಗಿ ಸದ್ದು ಮಾಡಿದ್ದೇ ಇಲ್ಲ. ಅಲ್ಲಿ ನಿವ್ವಳ ಸಾಫ್ಟ್ವೇರ್ ವಹಿವಾಟು ಕೇವಲ 200 ಕೋಟಿ ರುಪಾಯಿ. ಕರ್ನಾಟಕದಲ್ಲಿ 9,000 ಕೋಟಿ ರುಪಾಯಿ. ನೆರೆಯ ಆಂಧ್ರಪ್ರದೇಶ ಕೂಡ ಐಟಿ ವಿಷಯದಲ್ಲಿ ಜೋರಾಗೇ ಇದೆ. ಹೀಗಾಗಿ 2001ನೇ ಇಸವಿಯಲ್ಲಿ ಕೇರಳ ಮುಖ್ಯಮಂತ್ರಿ ಗಾದಿಗೆ ಬಂದ ಆ್ಯಂಟನಿ ತಾವೂ ಐಟಿ ವಿಷಯದಲ್ಲಿ ಹಿಂದೆ ಬೀಳಬಾರದು ಎಂದು ಆಸ್ಥೆಯಿಂದ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗೇ ಖುದ್ದು ಬೆಂಗಳೂರಿಗೆ ಬಂದು ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಜೊತೆ ಮಾತಾಡಿಕೊಂಡು ಹೋಗಿದ್ದಾರೆ.
ಆ್ಯಂಟನಿ ಪ್ರಸ್ತಾವನೆಗೆ ನಾರಾಯಣ ಮೂರ್ತಿ ನೇರವಾಗಿ ಅಸ್ತು ಅಂದಿದ್ದಾರೆ. ಆದರೆ, ಅಜೀಂ ಪ್ರೇಂಜಿ ಸ್ವಲ್ಪ ಯೋಚಿಸಲು ಟೈಂ ಕೇಳಿದ್ದಾರೆ. ಇನ್ಫೋಸಿಸ್ ಕೇಂದ್ರ ತಮ್ಮ ರಾಜ್ಯದಲ್ಲಿ ತಲೆಯೆತ್ತುವುದರಿಂದ ಐಟಿ ಕ್ಷೇತ್ರಕ್ಕೆ ಕೇರಳದಲ್ಲಿ ಹೊಸ ವೇಗ ದಕ್ಕುತ್ತದೆ ಎಂಬುದು ಆ್ಯಂಟನಿ ನಂಬಿಕೆ.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ