ಹಾಸನ ಬಳಿ ಭೀಕರ ರಸ್ತೆ ಅಪಘಾತ :12 ಸಾವು
ಹಾಸನ : ಹತ್ತಿರದ ಸಂಕೇನಹಳ್ಳಿ ಬಳಿ ಮಂಗಳವಾರ ಬೆಳಗ್ಗೆ ಮ್ಯಾಕ್ಸಿಕ್ಯಾಬೊಂದು ಮರಕ್ಕೆ ಗುದ್ದಿದ ಕಾರಣ 12 ಮಂದಿ ಸತ್ತಿದ್ದು, 33 ಮಂದಿ ಆಸ್ಪತ್ರೆಗೆ ಸೇರುವಂತಾಯಿತು.
ಹಾಸನದಿಂದ 2 ಕಿ.ಮೀ. ದೂರದಲ್ಲಿ ಅರಸೀಕೆರೆ ಮಾರ್ಗದಲ್ಲಿ ಈ ಅವಘಡ ಸಂಭವಿಸಿತು. 9 ಮಂದಿ ಸ್ಥಳದಲ್ಲೇ ಮೃತ ಪಟ್ಟರು. ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
ಮೃತರ ಪೈಕಿ ಮೂವರ ಗುರುತು ಇನ್ನೂ ಗೊತ್ತಾಗಿಲ್ಲ. ಗುರುತಿಗೆ ಸಿಕ್ಕ ಮೃತರು- ಕೃಷ್ಣೇಗೌಡ (45), ಪರಮೇಶ್ (24), ಶಿವಣ್ಣ (31), ಮಂಜುಳಾ (35), ರಂಗೇಗೌಡ (46), ಶಿವಣ್ಣ (42), ರಾಜೇಗೌಡ (56) ಹಾಗೂ ಜವರೇಗೌಡ (70).
ಅರಸೀಕೆರೆಯಿಂದ ಹಾಸನಕ್ಕೆ ಸಂತೆಗಾಗಿ ಮ್ಯಾಕ್ಸಿಕ್ಯಾಬ್ ಪ್ರಯಾಣಿಕರನ್ನು ಹೊತ್ತು ತರುತ್ತಿತ್ತು. ಖಚಾಖಚಿ ತುಂಬಿದ್ದ ವಾಹನದಲ್ಲಿ ಸುಮಾರು 44 ಮಂದಿ ಇದ್ದರು. ಯಾರೊಬ್ಬರೂ ಆಸ್ಪತ್ರೆಗೆ ಸೇರದೇ ಉಳಿದಿಲ್ಲ. ಗಾಯಾಳುಗಳ ಪೈಕಿ ನಾಲ್ವರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಅತಿ ವೇಗವಾಗಿ ವಾಹನ ಓಡಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಹೀಗಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಸ್ಥಳೀಯ ಆಸ್ಪತ್ರೆಯ ಮುಂದೆ ಮೃತರ ಬಂಧುಗಳ ರೋದನ ಮುಗಿಲು ಮುಟ್ಟಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...