ಜನವರಿ 13ಕ್ಕೆ ಕಾವೇರಿ ನದಿ ಪ್ರಾಧಿಕಾರದ ಸಭೆ
ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನವರಿ 13ನೇ ತಾರೀಕು ಕಾವೇರಿ ನದಿ ಪ್ರಾಧಿಕಾರ (ಸಿಆರ್ಎ) ದ ಸಭೆ ಕರೆದಿದ್ದಾರೆ.
ಶುಕ್ರವಾರ ಬೆಂಗಳೂರಲ್ಲಿ ಸುದ್ದಿಗಾರರಿಗೆ ಪ್ರಧಾನಿ ಈ ವಿಷಯ ತಿಳಿಸಿದರು. ಕರ್ನಾಟಕಕ್ಕೆ ನೀರಿನ ತೊಂದರೆಯಿದೆ. ಸಭೆಯಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಡಿಸುವಿರೇ ಎಂಬ ಪ್ರಶ್ನೆಗೆ, ‘ನಿಮ್ಮಂತೆ ತಮಿಳುನಾಡಿನವರಿಗೂ ನೀರಿನ ಸಮಸ್ಯೆ ಇದೆ. ಅದಕ್ಕೂ ಕಿವಿಗೊಡಬೇಕಲ್ಲವೇ’ ಎಂದು ಮರುಪ್ರಶ್ನೆ ಎಸೆದರು.
ಕಾವೇರಿ ನದಿ ಪ್ರಾಧಿಕಾರ ಈ ಹಿಂದೆ ಕೊಟ್ಟಿರುವ ತೀರ್ಪಿನಂತೆ ನಿತ್ಯ 0.8 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗುವುದಿಲ್ಲ. ಬೇಗ ಪ್ರಾಧಿಕಾರದ ಸಭೆ ಕರೆಯಿರಿ ಎಂದು ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಈಗಾಗಲೇ ಪ್ರಧಾನಿಗೆ ಪತ್ರ ಬರೆದಿದ್ದರು.
ಜ.13ನೇ ತಾರೀಕು ಜಯಲಲಿತಾ ಮತ್ತೆ ನೀರಿಗಾಗಿ ಪಟ್ಟು ಹಿಡಿಯುವರೇ ಅಥವಾ ಸಭೆಗೆ ಚಕ್ಕರ್ ಕೊಡುವರೇ? ಬೇಸಗೆ ಹತ್ತಿರಾಗುತ್ತಿರುವುದರಿಂದ ಕರ್ನಾಕದ ಕಣ್ಣಿಗೆ ಪ್ರಧಾನಿ ಸುಣ್ಣ ಹಚ್ಚಿದರೆ ಮಂಡ್ಯ- ಮೈಸೂರನ್ನು ದೇವರೇ ಕಾಪಾಡಬೇಕು !
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...