ಲಾರಿ ಮುಷ್ಕರ ಯಶಸ್ವಿ : ಮಾರುಕಟ್ಟೆಗಳು ಭಣಭಣ
ಬೆಂಗಳೂರು : ಹೊಸ ವರ್ಷದ ಮೊದಲ ದಿನದಿಂದಲೇ ಶುರುವಾಗಿರುವ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಬರುವ ದಿನಗಳಲ್ಲಿ ನಿತ್ಯ ಬಳಕೆಯ ಪದಾರ್ಥಗಳ ಬೆಲೆ ಏರುವ ಮಾತು ಕೇಳಿ ಬರುತ್ತಿದೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸರಕು ಸಾಗಣೆ ಲಾರಿಗಳ ಸಂಚಾರ ಸ್ಥಗಿತಗೊಂಡಿತ್ತು. ದಿನ ನಿತ್ಯ ಬಳಕೆಯ ವಸ್ತುಗಳಾದ ಹಾಲು, ತರಕಾರಿ ಮತ್ತು ದಿನಸಿ ಪದಾರ್ಥಗಳ ಸಾಕಣೆಗೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಎಂಟಿಸಿ ಬಸ್ಗಳನ್ನೇ ಬಳಸಲಾಯಿತು. ಸದ್ಯಕ್ಕೆ ಪೆಟ್ರೋಲ್ ಸೇರಿದಂತೆ ತೀರಾ ಅಗತ್ಯ ವಸ್ತುಗಳ ಸಾಗಣೆಗೆ ಸರ್ಕಾರ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ.
ಕೆ.ಆರ್.ಮಾರುಕಟ್ಟೆ, ಕಲಾಸಿ ಪಾಳ್ಯ ಹಾಗೂ ಯಶವಂತಪುರದ ಮಾರುಕಟ್ಟೆಗಳು ಬುಧವಾರ (ಜ.1) ಸಂಜೆ ಹೊತ್ತಿಗೆ ಬಿಕೋ ಎನ್ನುತ್ತಿದ್ದವು. ಮಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ ಸೇರಿದಂತೆ ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ಲಾರಿ ಸಂಚಾರ ಸ್ಥಗಿತಗೊಂಡಿತ್ತು. ಹಳ್ಳಿಗಳಿಂದ ಮಾರುಕಟ್ಟೆಗೆ ತರಕಾರಿ ಸಾಗಿಸಲು ಜನರು ಗಾಡಿಗಳು ಹಾಗೂ ಟ್ರ್ಯಾಕ್ಟರ್ಗಳನ್ನು ಬಳಸಿದರು.
ಬೆಂಗಳೂರು ವಲಯದಲ್ಲಿ 20 ವರ್ಷಕ್ಕಿಂತ ಹಳೆಯ ಸರಕು ಸಾಗಣೆ ವಾಹನಗಳ ಸಂಚಾರವನ್ನು ಜನವರಿ 1ರಿಂದ ಸರ್ಕಾರ ನಿಷೇಧಿಸಿರುವುದನ್ನು ವಿರೋಧಿಸಿ ನಡೆಯುತ್ತಿರುವ ಲಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಹೀಗೇ ಮುಂದುವರೆದರೆ ಅಗತ್ಯ ವಸ್ತುಗಳ ಬೆಲೆ ತುಟ್ಟಿಯಾಗುವ ಆತಂಕವಿದೆ.
ಮುಷ್ಕರ ನಿರತ ಲಾರಿ ಮಾಲಿಕರ ಜೊತೆ ಯಾವುದೇ ರಾಜಿಗೆ ಸಿದ್ಧವಿಲ್ಲ. ಅಗತ್ಯ ವಸ್ತುಗಳ ಸಾಗಣೆ ಮಾಡಲು ನಾವು ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದೇವೆ. ಜನರಿಗೆ ಯಾವುದೇ ತೊಂದರೆಯಾಗದು ಎಂದು ಸಾರಿಗೆ ಆಯುಕ್ತ ಟಿ.ತಿಮ್ಮೇಗೌಡ ಪ್ರತಿಕ್ರಿಯಿಸಿದ್ದಾರೆ.
ಗುರುವಾರ (ಜ. 2) ಕೂಡ ಲಾರಿಗಳು ನಿಂತಲ್ಲೇ ನಿಂತಿವೆ. ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮೊದಲ ರೀತಿಯ ವ್ಯಾಪಾರದ ಭರಾಟೆಯಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...