ದಿನಕರ್ ಪುಸ್ತಕ ಮಾರಲು ನಾ ಮುಂದು ತಾ ಮುಂದು
ಬೆಂಗಳೂರು : ಇಂದಿರಾನಗರದಲ್ಲಿರುವ ಕರ್ನಾಟಕದ ಮಾಜಿ ಡಿಜಿಪಿ ಸಿ.ದಿನಕರ್ ಮನೆ ಮುಂದೆ 'ವೀರಪ್ಪನ್ಸ್ ಪ್ರೆೃಸ್ ಕ್ಯಾಚ್: ರಾಜ್ಕುಮಾರ್" ಪುಸ್ತಕ ಕೊಳ್ಳಲು ಜನವೋ ಜನ. ಇದೇ ಗುಂಪಲ್ಲಿ ತಮಗೂ ಪುಸ್ತಕ ಮಾರುವ ಅನುಮತಿ ಕೊಡಿಸಿರೆಂದು ಮನವಿ ಮಾಡುತ್ತಿರುವ ಪುಸ್ತಕ ವ್ಯಾಪಾರಿಗಳೂ ಉಂಟು !
ದೆಹಲಿ ಮೂಲದ ಕೊನಾರ್ಕ್ ಪ್ರಕಾಶಕರು ಈ ಪುಸ್ತಕವನ್ನು ದೇಶಾದ್ಯಂತ ಮಾರಲು ಆಮೆ ವೇಗದ ವ್ಯವಸ್ಥೆ ಮಾಡುತ್ತಿದ್ದಾರೆ. ವಿವಾದಕ್ಕೆ ಗುರಿಯಾಗಿ, ಈ ಪುಸ್ತಕದ ಮಾರಾಟವನ್ನೇ ನಿಷೇಧಿಸಬಹುದೆಂಬ ಆತಂಕ ಇದ್ದಿದ್ದರಿಂದ ವಾರದ ಹಿಂದೆ ಈ ಪುಸ್ತಕ ಮಾರಲು ಮುಂದೆ ಬಂದ ಪುಸ್ತಕ ವ್ಯಾಪಾರಿಗಳು ತೀರಾ ಕಡಿಮೆ. ದೊಡ್ಡ ದೊಡ್ಡ ಪುಸ್ತಕದಂಗಡಿಗಳಿಗೆ ಸಿಕ್ಕಾಪಟ್ಟೆ ಪ್ರತಿಗಳನ್ನು ಕೊಟ್ಟು, ಅಕಸ್ಮಾತ್ ಯಾರಾದರೂ ದಾಳಿಯಿಟ್ಟು ಹಾಳುಗೆಡವಿದರೆ ಲಕ್ಷಾಂತರ ರುಪಾಯಿ ಲುಕಸಾನಾಗಬಹುದೆಂಬುದು ಕೊನಾರ್ಕ್ ಸಂಸ್ಥೆಯ ಲೆಕ್ಕಾಚಾರ.
ಈ ಕಾರಣಕ್ಕೇ ಚೆನ್ನೈನ ಒಂದು ಗುಪ್ತ ಜಾಗೆಯಲ್ಲಿ ಪುಸ್ತಕದ ಎಲ್ಲಾ ಪ್ರತಿಗಳನ್ನು ದಾಸ್ತಾನು ಮಾಡಲಾಗಿದೆ. ಹಿಗಿನ್ ಬಾಥಮ್ಸ್ ಸೇರಿದಂತೆ ದೊಡ್ಡ ದೊಡ್ಡ ಪುಸ್ತಕ ಮಳಿಗೆಗಳಲ್ಲೂ ಈಗ (ಚೆನ್ನೈನಲ್ಲಿ ಮಾತ್ರ) ಸರಸರನೆ ಪುಸ್ತಕಗಳು ಮಾರಾಟವಾಗುತ್ತಿವೆ. ಆದರೆ ಬೆಂಗಳೂರಲ್ಲಿ ಪುಸ್ತಕದ ಹೂರಣಕ್ಕೆ ಸಾಕಷ್ಟು ವಿರೋಧವಿರುವುದರಿಂದ ರಿಸ್ಕ್ ತೆಗೆದುಕೊಳ್ಳಲು ಕೊನಾರ್ಕ್ ಸಂಸ್ಥೆ ಸಿದ್ಧವಿಲ್ಲ. ಅದಕ್ಕೇ ದಿನಕರ್ ಮನೆಯೇ ಪುಸ್ತಕದಂಗಡಿಯಾಗಿದೆ. ಅವರ ಖಾಸಗಿ ಸಿಬ್ಬಂದಿ ಹಾಗೂ ಎರಡು ರಿವಾಲ್ವರ್ಗಳೇ ರಕ್ಷಣೆಯ ಬೇಲಿ.
ಈಗ ಪುಸ್ತಕ ಮಾರಾಟ ನಿಷೇಧಿಸುವ ಸೊಲ್ಲು ತಣ್ಣಗಾಗಿರುವುದರಿಂದ ಬೆಂಗಳೂರಿನ ಪುಸ್ತಕ ಮಾರಾಟಗಾರರಿಗೆ ದಿಢೀರ್ ಧೈರ್ಯ ಬಂದುಬಿಟ್ಟಿದೆ. ಗೋಬಿ ಮಂಚೂರಿ ಪರಿಯಲ್ಲಿ ದಿನಕರ್ ಪುಸ್ತಕ ಬಿಕರಿಯಾಗುತ್ತಿರುವುದರಿಂದ ಇದೇ ಅವಕಾಶ ಉಪಯೋಗಿಸಿಕೊಂಡು, ಒಂದಿಷ್ಟು ಲಾಭ ಮಾಡಿಕೊಳ್ಳುವ ಉಮೇದಿ ಹೊತ್ತವರು ಕಡಿಮೆಯಿಲ್ಲ. ಇವರೆಲ್ಲ ತಮಗೂ ಪುಸ್ತಕ ಮಾರಲು ಅವಕಾಶ ಮಾಡಿಕೊಡಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಆದರೆ ಕೊನಾರ್ಕ್ ಸಂಸ್ಥೆ ಇದಕ್ಕೆ ಇನ್ನೂ ಅಸ್ತು ಎಂದಿಲ್ಲ.
ದಿನಕರ್ ಹೀಗಂತಾರೆ-
ಎಲ್ಲರಿಗೂ ಪುಸ್ತಕ ಮಾರಾಟಕ್ಕೆ ಅನುಮತಿ ಕೊಡದಿರಲು ಬಲವಾದ ಕಾರಣವಿದೆ. ಇದನ್ನೂ ಮೀರಿ ಅಕ್ರಮವಾಗಿ ಮಾರಾಟ ಮಾಡುವವರೂ ಇದ್ದಾರೆ. ಅಂಥವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ನನಗಂತೂ ಒಂದು ದಿನ ಮಾತ್ರ ರಕ್ಷಣೆ ಕೊಟ್ಟು , ಸರ್ಕಾರ ಸುಮ್ಮನಾಗಿದೆ. ಎಷ್ಟೋ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಪೇದೆಗಳು ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮಾಡುತ್ತಿದ್ದಾರೆ. ನಾನು ಡಿಜಿಪಿ ಆಗಿದ್ದಾಗ ಇದನ್ನು ನಿವಾರಿಸಿದ್ದೆ. ನಾನು ಆಚೆಗೆ ಬಂದ ಕೆಲವು ದಿನಗಳಲ್ಲೇ ಮತ್ತೆ ಅದೇ ಚಾಳಿ ಮುಂದುವರೆದಿದೆ. ಸದ್ಯಕ್ಕೆ ನನ್ನ ಖಾಸಗಿ ಸಿಬ್ಬಂದಿ ರಕ್ಷಣೆಗಿದ್ದಾರೆ.(ಇನ್ಫೋ ವಾರ್ತೆ)