ತಮ್ಮ ಹೆಲಿಕಾಪ್ಟರಿಗೆ ಪೈಲಟ್ ಹುಡುಕಿ ಕೃಷ್ಣ ಸುಸ್ತಾಗಿದ್ದಾರೆ
ಬೆಂಗಳೂರು : ಕನ್ನಡಿಗರಲ್ಲಿ ಸಾಹಸಿ ಪ್ರವೃತ್ತಿ ಮಾಯವಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಕೃಷ್ಣ ಉದಾಹರಿಸಿದ್ದು ತಮ್ಮ ಪೈಲಟ್ಟೇ ಇಲ್ಲದ ಹೆಲಿಕಾಪ್ಟರನ್ನು.
ಬೆಂಗಳೂರು ಮಹಾನಗರ ಪಾಲಿಕೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೆಸರು ಕಲ್ಲು ಹಾಕಿ ಭಾನುವಾರ ಅವರು ಮಾತಾಡುತ್ತಿದ್ದರು. ಕೊಡವರು ಸೈನ್ಯಕ್ಕೆ ಸೇರಲೆಂದೇ ಹೆಸರು ವಾಸಿಯಾಗಿದ್ದರು. ಆದರೀಗ ಅವರಲ್ಲೂ ಸಾಹಸಿ ಪ್ರವೃತ್ತಿ ಮಾಯವಾಗುತ್ತಿದೆ. ಜನ ವಿಧಾನ ಸೌಧದ ಕೆಲಸಕ್ಕೇ ಅರ್ಜಿ ಗುಜರಾಯಿಸುತ್ತಾ ಕೂರುತ್ತಾರೆ. ಮಿಲಿಟರಿ ಸೇರುವ ಸಾಹಸವನ್ನು ಯೋಚಿಸುವುದೇ ಇಲ್ಲ ಎಂದು ಕೃಷ್ಣ ಹೇಳಿದರು.
ಒಂದು ವರ್ಷದಿಂದ ಸರ್ಕಾರಿ ಹೆಲಿಕಾಪ್ಟರಿಗೆ ಪೈಲಟ್ ಇಲ್ಲ. ಹುಡುಕುವ ಪ್ರಯತ್ನವೂ ಫಲ ಕೊಡಲಿಲ್ಲ. ಜನರಲ್ಲಿ ಸಾಹಸಿ ವೃತ್ತಿಗಳತ್ತ ಒಲವೇ ಇಲ್ಲದಿರುವುದಕ್ಕೆ ಇದೊಂದೇ ನಿದರ್ಶನ ಸಾಕು ಎಂದ ಕೃಷ್ಣ ,- ದೇಶದ ಅನೇಕ ರಾಜ್ಯಗಳ ಜನ ಬಂದು, ಬೆಂಗಳೂರಲ್ಲಿ ನಿವೇಶನ ಖರೀದಿಸಿದ್ದಾರೆ. ಆದರೆ ಎಷ್ಟು ಬೆಂಗಳೂರಿಗರು ದೆಹಲಿಯಲ್ಲಿ ನಿವೇಶನ ಕೊಂಡಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.
ಹಾರ್ವರ್ಡ್ ವಿಶ್ವವಿದ್ಯಾಲಯವು Indian Dimension ಎಂಬ ಪುಸ್ತಕ ಪ್ರಕಟಿಸುತ್ತಿದ್ದು, ಅದರಲ್ಲಿ ಬೆಂಗಳೂರನ್ನು ವಿಶೇಷವಾಗಿ ನಮೂದಿಸಲಾಗಿದೆ. ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸೃಜನಶೀಲತೆಯಲ್ಲಿ ನಗರ ಮಾಡಿರುವ ಸಾಧನೆಗೆ ಹಿಡಿದ ಕನ್ನಡಿಯಿದು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ