ನ್ಯೂಜಿಲೆಂಡ್ ಟೆಸ್ಟ್ : ಶ್ರೀನಾಥ್, ಕುಂಬ್ಳೆ ಆಡೋಲ್ಲ
ಮುಂಬಯಿ : ಭಾರತ ಕ್ರಿಕೆಟ್ ಆಯ್ಕೆ ಮಂಡಳಿ ನ್ಯೂಜಿಲೆಂಡ್ ಪ್ರವಾಸದ ಎರಡು ಟೆಸ್ಟ್ಗಳಿಗೆ ಸೋಮವಾರ ಹೆಕ್ಕಿದ 16 ಮಂದಿಯ ಭಾರತ ಕ್ರಿಕೆಟ್ ತಂಡದಲ್ಲಿ ಶ್ರೀನಾಥ್ ಮತ್ತು ಕುಂಬ್ಳೆ ಹೆಸರಿಲ್ಲ. ವಿಂಡೀಸ್ ವಿರುದ್ಧ ತವರು ನೆಲದಲ್ಲಿನ ಕಳಪೆ ಪ್ರದರ್ಶನದ ನಂತರವೂ ಆಶಿಶ್ ನೆಹ್ರಾಗೆ ಇನ್ನೊಂದು ಅವಕಾಶ ಸಿಕ್ಕಿದೆ.
ಗಾಯಾಳುಗಳಾಗಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಭರವಸೆಯ ಉದಯೋನ್ಮುಖ ವೇಗಿ ಜಹೀರ್ ಖಾನ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶಿವಸುಂದರ್ ದಾಸ್ಗೆ ಇನ್ನೊಂದು ಅವಕಾಶ ಕೊಡಲಾಗಿದೆ. ಪಾರ್ಥಿವ್ ಪಟೇಲ್ ಜತೆಗೆ ಅಜಯ್ ರಾತ್ರಾ ಅವರನ್ನೂ 16 ಮಂದಿಯ ತಂಡದಲ್ಲಿ ಆರಿಸಲಾಗಿದೆ. ಹೀಗಾಗಿ ಪಾರ್ಥಿವ್ಗೆ ಅವಕಾಶ ಈಗ ಸಲೀಸಲ್ಲ. ಉಳಿದಂತೆ ತಂಡ ವಿಂಡೀಸ್ ವಿರುದ್ಧದ ಪರಿಯಲ್ಲೇ ಇದೆ. ಕುಂಬ್ಳೆ ಬದಲಿಗೆ ಮುರಳಿ ಕಾರ್ತೀಕ್ಗೆ ಅವಕಾಶ ಸಿಕ್ಕಿದೆ.
ಕೆಲವು ಖಾಸಗಿ ಕಾರಣಗಳಿಂದ ನ್ಯೂಜಿಲೆಂಡ್ ಪ್ರವಾಸಕ್ಕೆ ತಮ್ಮ ಹೆಸರನ್ನು ಪರಿಗಣಿಸಬೇಡಿ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ ಕುಂಬ್ಳೆ ಮನವಿ ಸಲ್ಲಿಸಿದ ಕಾರಣ ಅವರನ್ನು ಆಯ್ಕೆ ಮಾಡಲಿಲ್ಲ. ವಿಂಡೀಸ್ನ ದೀರ್ಘ ಕಾಲದ ಕಠಿಣ ಪಂದ್ಯಗಳಿಂದ ಶ್ರೀನಾಥ್ ಬಳಲಿರುವ ಕಾರಣ ಅವರಿಗೆ ವಿಶ್ರಾಂತಿ ಕೊಡಲಾಗಿದೆ ಎಂದು ಆಯ್ಕೆ ಮಂಡಳಿ ಸಮರ್ಥನೆ ಕೊಟ್ಟಿದೆ.
ತಂಡ ಹೀಗಿದೆ : ಸೌರವ್ ಗಂಗೂಲಿ (ನಾಯಕ), ರಾಹುಲ್ ದ್ರಾವಿಡ್ (ಉಪ ನಾಯಕ), ಸಚಿನ್ ತೆಂಡೂಲ್ಕರ್, ವಿ.ವಿ.ಎಸ್.ಲಕ್ಷ್ಮಣ್, ಸಂಜಯ್ ಬಂಗಾರ್, ಮುರಳಿ ಕಾರ್ತಿಕ್, ಹರ್ಭಜನ್ ಸಿಂಗ್, ಎಸ್.ಎಸ್.ದಾಸ್, ಅಜಿತ್ ಅಗರ್ಕರ್, ಆಶಿಶ್ ನೆಹ್ರಾ, ಜಹೀರ್ ಖಾನ್, ಪಾರ್ಥಿವ್ ಪಟೇಲ್, ಮೊಹಮ್ಮದ್ ಕೈಫ್, ಅಜಯ್ ರಾತ್ರಾ, ಟಿನು ಯಾಹಾನನ್.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...