ಧಾರವಾಡದಲ್ಲಿ ರಂಗೋತ್ಸವ, ಕಂಬಾರರಿಗೆ ಅಭಿನಂದನೆ
ಧಾರವಾಡ : ಡಿಸೆಂಬರ್ 21ರಿಂದ ಐದು ದಿನಗಳ ಕಾಲ ಧಾರವಾಡದಲ್ಲಿ ರಂಗೋತ್ಸವ ನಡೆಸಲು ಕರ್ನಾಟಕ ನಾಟಕ ಅಕಾಡೆಮಿ ನಿರ್ಧರಿಸಿದೆ.
ನಾಟಕ ಅಕಾಡೆಮಿಯ ಅಧ್ಯಕ್ಷ ಆರ್. ನಾಗೇಶ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸಾಧನಕೇರಿಯ ಬೇಂದ್ರೆ ಭವನದಲ್ಲಿ ನಡೆದ ನಾಟಕ ಅಕಾಡೆಮಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ರಂಗೋತ್ಸವವನ್ನು ಸೃಜನಾ ಅಣ್ಣಾಜಿ ರಾವ್ ಶಿರೂರ ರಂಗಮಂದಿರದಲ್ಲಿ ನಡೆಸಲಾಗುವುದು ಎಂದು ನಾಗೇಶ್ ತಿಳಿಸಿದರು.
ಅಗ್ನಿ ಮತ್ತು ಮಳೆ, ದಂಡೆ, ಸುಲ್ತಾನ ಟಿಪ್ಪು, ಯುದ್ಧ ಭಾರತ, ಹಾಗೂ ಮಹಾಮಾಯೆ ನಾಟಕಗಳು ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಅಲ್ಲದೆ ರಂಗೋತ್ಸವ ಆರಂಭದ ಮುನ್ನಾ ದಿನ ಡಿ. 20ರಂದು ರಂಗಭೂಮಿ ತಜ್ಞ ಬಿ. ವಿ. ಕಾರಂತರ ದಿವ್ಯ ಸ್ಮೃತಿಗಾಗಿ ಬಾನಾಡಿ ಸಾಕ್ಷ್ಯಚಿತ್ರ ಪ್ರದರ್ಶನದ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ನಾಗೇಶ್ ಹೇಳಿದರು.
ಹೊಸ ಶತಮಾನದ ಹೊಸಿಲಲ್ಲಿ ಎಂಬ ಕುರಿತು ವಿಚಾರ ಸಂಕಿರಣ, ಕಂಬಾರರ ರಂಗ ಕೃತಿ ಹಾಗೂ ಪ್ರಯೋಗಗಳ ಬಗ್ಗೆ ಚರ್ಚೆ ಮತ್ತು ಕಬೀರ ಸಮ್ಮಾನ್ ಪ್ರಶಸ್ತಿ ವಿಜೇತ ಕಂಬಾರರಿಗೆ ಅಭಿನಂದನೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ .
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...